ಪುತ್ತೂರು: `ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಡಿ ನಡೆಯುವ ವಿವಿಧ ಕಾರ್ಯಕ್ರಮಗಳ ಮೂಲಕ ಮಾಹಿತಿ ಪಡೆದುಕೊಂಡು ಸಮಾಜದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು. ಆರೋಗ್ಯ ಸಂರಕ್ಷಣೆಯ ಕಡೆಗೆ ಗಮನ ಹರಿಸುವ ಜತೆಗೆ ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವ ಪ್ರಯತ್ನ ನಡೆಸಬೇಕು' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು.
ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿವಿಧ ಕಾರ್ಯಚಟುವಟಿಕೆಗಳು ಮತ್ತು ಆರೋಗ್ಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಪ್ತ ಸಲಹೆಗಾರ ತಾರಾನಾಥ ರೈ ನೀರಾಳ ಅವರು, ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಜಯಶ್ರಿ ಬಿ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪ ಪ್ರಾಂಶುಪಾಲರಾದ ಜಯಲಕ್ಷ್ಮಿ , ಶಾಲಾ ಎಸ್ಡಿಎಂಸಿ ಸದಸ್ಯ ಜೀಕಿಂ ಡಿ.ಸೋಜ, ಕಾರ್ಯಕ್ರಮ ಸಂಯೋಜಕರಾದ ಚಿತ್ರಕಲಾ ಶಿಕ್ಷಕ ಜಗನ್ನಾಥ್ ಪಿ, ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ, ವಿದ್ಯಾರ್ಥಿಗಳಾದ ಶೈಲೇಶ್, ವಿಜೇತ್, ಸುಕೇಶ್, ಲೋಕೇಶ್ .ಡಿ, ಸೌಜನ್ಯ , ಕಾವ್ಯಾ ಮತ್ತಿತರರು ಇದ್ದರು.