ಬಲಿಯಾ (ಪಿಟಿಐ): ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಧ ನ್ಯಾಯ ಮಂಡಳಿ ಬಾಲ ಆರೋಪಿಗೆ ನೀಡಿದ ಶಿಕ್ಷೆಯ ಪ್ರಮಾಣದ ಬಗ್ಗೆ ಅಸಮಾಧಾನಗೊಂಡಿರುವ ಯುವತಿಯ ಕುಟುಂಬ, ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದೆ.
`ಈ ಕುರಿತು ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕ ವಾದ್ರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, 10 ದಿನಗಳ ಒಳಗೆ ಭೇಟಿ ಮಾಡಲು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ನನ್ನ ಮಗಳ ನ್ಯಾಯಕ್ಕಾಗಿ ಸೋನಿಯಾ, ಶೀಲಾ ದೀಕ್ಷಿತ್, ರಾಹುಲ್ ಗಾಂಧಿ ಹಾಗೂ ರೇಣುಕಾ ಚೌಧರಿ ಅವರ ಭೇಟಿಗೂ ಪ್ರಯತ್ನಿಸುತ್ತಿದ್ದೇವೆ' ಎಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಂದೆ ವರದಿಗಾರರಿಗೆ ಹೇಳಿದ್ದಾರೆ.
`ಈ ತೀರ್ಪು ವಿಷಾದಕರವಾಗಿದ್ದು, ಆತನಿಗೆ ಮರಣದಂಡನೆ ಶಿಕ್ಷೆ ನೀಡಬೇಕಿತ್ತು. ಈ ಕುರಿತಂತೆ ನಮ್ಮ ವಕೀಲರ ಬಳಿ ಮಾತನಾಡುತ್ತೇವೆ. ಇನ್ನುಳಿದ ನಾಲ್ಕು ಆರೋಪಿಗಳ ತೀರ್ಪು ಮುಂದಿನ 10-15 ದಿನಗಳಲ್ಲಿ ಪ್ರಕಟವಾಗಬಹುದು. ಅವರಿಗೆ ಖಂಡಿತಾ ಉಗ್ರ ಶಿಕ್ಷೆ ಆಗುತ್ತದೆ' ಎಂದು ಯುವತಿಯ ತಂದೆ ದೂರವಾಣಿ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
`ನರೇಂದ್ರ ಮೋದಿ ಅವರು ನಮ್ಮನ್ನು ಭೇಟಿ ಮಾಡಿದ್ದರೆ, ಆಸರೆ ಸಿಗುವ ನಿರೀಕ್ಷೆ ಇರುತ್ತಿತ್ತು. ಆದರೆ ಈವರೆಗೆ ಅವರು ತಮ್ಮನ್ನು ಭೇಟಿ ಮಾಡಿಲ್ಲ' ಎಂದು ಅವರು ಹೇಳಿದ್ದಾರೆ.