ಬೆಂಗಳೂರು: ಖಾಲಿ ಖಾಲಿ ರಸ್ತೆಗಳು, ವಾಹನಗಳಿಗಾಗಿ ಕಾಯುತ್ತಿದ್ದ ಸಿಗ್ನಲ್ಗಳು, ರಸ್ತೆಗಿಳಿದಿದ್ದ ಬೆಂಗಳೂರಿನ ವಾಹನ ಸವಾರರಿಗೆ ಹೊಸ ಅನುಭವ. ನಗರದಲ್ಲಿ ವಾಹನ ದಟ್ಟಣೆ, ಟ್ರಾಫಿಕ್ ಜಾಮ್ ಸಾಮಾನ್ಯ. ಆದರೆ ಸೋಮವಾರ ಈ ಯಾವ ಸಮಸ್ಯೆಗಳೂ ಇರಲಿಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ಮಹಾಶಿವರಾತ್ರಿ ಹಬ್ಬ.
ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯ ಜನರು ಶನಿವಾರವೇ ಸ್ವಂತ ಊರುಗಳಿಗೆ ಹೋಗಿದ್ದರು. ಹಬ್ಬ ಆಚರಿಸಿದ ಜನರು ಮನೆಯ ಸಮೀಪದ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಯಾವಾಗಲೂ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಕೆಂಪೇಗೌಡ ರಸ್ತೆ, ಕಸ್ತೂರಬಾ ರಸ್ತೆ, ಇನ್ಫೆಂಟ್ರಿ ರಸ್ತೆ, ಜೆ.ಸಿ.ರಸ್ತೆ, ಓಕಳಿಪುರ ರಸ್ತೆ, ಗೂಡ್ಸ್ಶೆಡ್ ರಸ್ತೆ ವಾಹನ ಸಂಖ್ಯೆ ವಿರಳವಾಗಿತ್ತು.