ಗಜೇಂದ್ರಗಡ: ಇಲ್ಲಿಗೆ ಸಮೀಪದ ಜಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಗುಡ್ಡದಲ್ಲಿ ಕಲ್ಲು ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸೋಮವಾರ ಇಲ್ಲಿನ ವಿಶೇಷ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಣ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಂಗಾಧರ ಪಾಟೀಲ, ಗುಡ್ಡದಲ್ಲಿ ನಡೆಸುತ್ತಿರುವ ಕಲ್ಲುಗಣಿಗಾರಿಕೆ ಹತ್ತಿರದಲ್ಲಿ ಐತಿಹಾಸಿಕ ಪ್ರಸಿದ್ಧ ಕಾಲಕಾಲೇಶ್ವರ ದೇವಸ್ಥಾನ, ಕಣವಿ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಸ್ಮಾರಕಗಳು ಇವೆ. ಇದನ್ನು ಲೆಕ್ಕಿಸದೇ ಹಗಲು ರಾತ್ರಿ ಗುಡ್ಡವನ್ನು ಕೊರೆಯುತ್ತಿರುವುದು ದೇವಸ್ಥಾನದ ಭಕ್ತರಿಗೆ ನೋವು ಉಂಟು ಮಾಡಿದೆ ಎಂದರು.
ಗಣಿಗಾರಿಕೆಯಿಂದ ಗುಡ್ಡದಲ್ಲಿರುವ ಸಸ್ಯ ಸಂಪತ್ತು ನಾಶವಾಗಿದೆ. ಜೊತೆಗೆ ಗುಡ್ಡದಲ್ಲಿ ಭಾರಿ ಸ್ಪೋಟಗಳು ನಡೆಯುತ್ತಿರುವುದರಿಂದ ಅಕ್ಕಪಕ್ಕದಲ್ಲಿ ಇರುವ ರೈತರ ಜಮೀನುಗಳಲ್ಲಿರುವ ಬೆಳೆಗಳಿಗೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ದೂರಿದರು.
ಗಣಿಗಾರಿಕೆಗೆ ಪರವಾನಗಿ ಪಡೆದ ಸ್ಥಳವನ್ನು ಬಿಟ್ಟು ಸರ್ಕಾರಿ ಜಾಗವಾದ ಗುಡ್ಡದಲ್ಲಿ ಹಲವು ತಿಂಗಳುಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಲೇ ಹತ್ತಾರು ಎಕರೆ ಪ್ರದೇಶದ ಗುಡ್ಡವನ್ನು ನೆಲಸಮ ಮಾಡಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಇಡೀ ಗುಡ್ಡ ಪ್ರದೇಶ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಗಜೇಂದ್ರಗಡ, ಜಿಗೇರಿ, ಕುಂಟೋಜಿ, ಕಾಲಕಾಲೇಶ್ವರ ಗುಡ್ಡದಲ್ಲಿ ಆಗಾಗ್ಗೆ ಅಕ್ರಮವಾಗಿ ಮಣ್ಣು, ಕಡಿ, ಕಲ್ಲಿನ ಗಣಿಗಾರಿಕೆ ನಡೆಯುತ್ತಲೇ ಇದೆ. ಪರಿಸ್ಥಿತಿ ಹೀಗಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ತಾಲ್ಲೂಕು ಆಡಳಿತ ಮುಂದಾಗದೇ ಮೌನಕ್ಕೆ ಶರಣಾ ಗಿರುವುದು ಸಂಶಯ ಮೂಡಿಸಿದೆ.
ಗಣಿಗಾರಿಕೆ ನಡೆದಿರುವ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರಹೋರಾಟ ಮಾಡಲಾ ಗುವುದು ಎಂದು ಅವರು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ವಿಶೇಷ ತಹಸೀಲ್ದಾರ ಕಚೇರಿಯ ಸಿಬ್ಬಂದಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ದರು. ಸಂತೋಷ ಕಟ್ಟಿ, ಮಲ್ಲಿಕಾ ರ್ಜುನ ಅಂಗಡಿ, ಮಂಜುನಾಥ ಕಲ್ಲಿಮಠ, ರವಿ ಪೂಜಾರ, ಶರಣು ಯರ ಗೇರಿ, ಸುರೇಶ ನಾಯ್ಕರ್, ಪ್ರಭು ಕರ ಮುಡಿ, ರಮೇಶ ಮಡಿವಾಳರ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.