ಬೆಂಗಳೂರು: ನಿವೇಶನದ ತೆರಿಗೆ ಬಾಕಿ ಸ್ವೀಕೃತಿ ರಸೀದಿ ನೀಡಲು 1,700 ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಥಮ ದರ್ಜೆ ಸಹಾಯಕ ಅಣ್ಣೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನಗರದ ರಸಾದ್ ಅಹ್ಮದ್ ಎಂಬುವರ ತಂದೆ 2003ರಲ್ಲಿ ಅಂಜನಾಪುರ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದರು. 2003ರಿಂದ ಈವರೆಗಿನ ತೆರಿಗೆ ಬಾಬ್ತು ಅವರು 2,000 ರೂಪಾಯಿಯನ್ನು ಬಿಡಿಎಗೆ ಪಾವತಿಸಬೇಕಿತ್ತು.
ಈ ಹಣ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ರೂ 1,700 ಲಂಚ ನೀಡುವಂತೆ ಅಣ್ಣೇಗೌಡ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಸಾದ್ ಅಹ್ಮದ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ ರಸಾದ್ ಅವರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಅಂಜನ್ಕುಮಾರ್ ನೇತೃತ್ವದ ತನಿಖಾ ತಂಡ ಅಣ್ಣೇಗೌಡ ಅವರನ್ನು ಬಂಧಿಸಿದೆ. ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.