ಮೂಡಿಗೆರೆ: ತಾಲ್ಲೂಕಿನ ಬಿದರಹಳ್ಳಿ, ಕೆಂಜಿಗೆ, ಬಾನಹಳ್ಳಿ ಗ್ರಾಮಗಳಿಗೆ ಗುರುವಾರ ತಡ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳ ದಂಡು, ಗ್ರಾಮದ ಬತ್ತದ ಗದ್ದೆ ಮತ್ತು ಕಾಫಿ ತೋಟಗಳಲ್ಲಿ ಸಂಚರಿಸಿ ಅಪಾರ ನಷ್ಟ ಉಂಟು ಮಾಡಿವೆ.
ನಾಲ್ಕು ಆನೆಗಳಿರುವ ತಂಡ ಸಾರಗೋಡು ಮೀಸಲು ಅರಣ್ಯದಿಂದ ಗ್ರಾಮಕ್ಕೆ ಬಂದಿವೆ ಎಂದು ಶಂಕಿಸಲಾಗಿದ್ದು, ಬಿದರಹಳ್ಳಿಯ ಬಿ.ಎಂ.ರಮೇಶ್ ಎಂಬುವವರ ಬತ್ತದ ಗದ್ದೆಯ ಮೂಲಕ ಸಾಗಿ, ಗದ್ದೆಯ ಬಳಿಯಲ್ಲಿಯೇ ಇರುವ ಕೆರೆಗೆ ಇಳಿದು ವಿದ್ಯುತ್ ಮೋಟಾರು, ನೀರೆತ್ತುವ ಪೈಪುಗಳನ್ನು ಹಾನಿಗೊಳಿಸಿವೆ. ದಾಳಿಯ ವೇಳೆ ವಿದ್ಯುತ್ ತಡೆಯಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಕೆರೆಯಿಂದ ಮೇಲೆದ್ದ ಆನೆಗಳು ಅಕ್ಕಪಕ್ಕದಲ್ಲಿರುವ ಬಿ.ಎಸ್.ಜಯರಾಮಗೌಡ, ಬಿ.ಎಂ.ಚಂದ್ರೇಗೌಡ, ಎಚ್.ಕೆ.ಪ್ರಭಾಕರ, ಬಿ.ಎಸ್.ನಾಗರಾಜುಗೌಡ ಮುಂತಾದವರ ಬತ್ತದ ಗದ್ದೆಗಳನ್ನು ತುಳಿದು ಹಾನಿಗೊಳಿಸಿದ್ದು, ಪಕ್ಕದಲ್ಲಿಯೇ ಇರುವ ಕಾಫಿ ತೋಟಗಳಲ್ಲಿ ಸಂಚರಿಸಿ ಕಾಫಿ ಗಿಡಗಳನ್ನು ತುಳಿದು ಹಾನಿಗೊಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ವಲಯ ಸಂರಕ್ಷಣಾಧಿಕಾರಿ ಸುದರ್ಶನ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು.
ಸ್ಥಳದಲ್ಲಿದ್ದ ಗ್ರಾಮಸ್ಥರು, ಹಿರಿಯ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಬೇಕೆಂದು ಬಿಗಿ ಪಟ್ಟು ಹಿಡಿದಿದ್ದರಿಂದ, ಉಪ ಅರಣ್ಯ ಸಂರಕ್ಷಕ ರವಿರಾಜ್ ನಾರಾಯಣ ಭೇಟಿ ನೀಡುವವರೆಗೂ ಗ್ರಾಮಸ್ಥರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು. ನಂತರ ಸ್ಥಳಕ್ಕೆ ಬಂದಿದ್ದ ಉಪ ಅರಣ್ಯ ಸಂರಕ್ಷಕ ರವಿರಾಜ್ ನಾರಾಯಣ, ಹಾನಿಯಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಮತ್ತು ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳದಲ್ಲಿ ಗ್ರಾಮಸ್ಥರಾದ ದಯಾಕರ್, ಲೋಹಿತ್, ರಮೇಶ್, ಜಯರಾಮಗೌಡ, ಚಂದ್ರೇಗೌಡ, ಬಿದರಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಮುಂತಾದವರಿದ್ದರು.