ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಶಿರಾಡಿ ಪರಿಸರದಲ್ಲಿ ಭಾನುವಾರ ನಸುಕಿನಲ್ಲಿ ಬೀಸಿದ ಬಿರುಗಾಳಿಗೆ ಮನೆಯೊಂದು ಧ್ವಂಸಗೊಂಡಿದ್ದು, ರೈತರ ಸಾವಿರಾರು ಅಡಿಕೆ, ರಬ್ಬರ್, ತೆಂಗಿನ ಮರಗಳು ಮುರಿದು ಬಿದ್ದಿವೆ.
ಬಿರುಗಾಳಿಯಿಂದ ಸುಮಾರು 50 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಶಿರಾಡಿ ನಿವಾಸಿ ಎವಿ. ಪತ್ರೋಸ್ ಅವರ ಮನೆಯ ಮೇಲೆ ತೆಂಗಿನ ಮರವೊಂದು ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಪರಿಸರದ ತೋಟಗಳ ಅಡಿಕೆ, ತೆಂಗಿನ ಮರಗಳು, ಬಾಳೆಗಿಡಗಳು ನೆಲಕ್ಕೆ ಉರುಳಿವೆ.
ಹೆದ್ದಾರಿ ಬಂದ್: ರಾಷ್ಟ್ರೀಯ ಹೆದ್ದಾರಿ 75ರ ಬದಿ ಉದನೆಯಿಂದ ಶಿರಾಡಿಯವರೆಗೆ ಸುಮಾರು 5 ಕಡೆ ಭಾರಿ ಗಾತ್ರದ ಮರಗಳು ಉರುಳಿ ರಸ್ತೆಗೆ ಬಿದ್ದ ಪರಿಣಾಮ, ನಸುಕಿನ 4 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಎರಡೂ ಕಡೆ ವಾಹನಗಳು 5 ಕಿ.ಮೀ.ವರೆಗೆ ಸಾಲಿನಲ್ಲಿ ನಿಂತಿದ್ದವು. ಮರಗಳನ್ನು ಭಾನುವಾರ ಬೆಳಿಗ್ಗೆ ತೆರವುಗೊಳಿಸಲಾಯಿತು.