ಮೊಳಕಾಲ್ಮುರು: ಕಾಡುತ್ತಿರುವ ಬರ ಮತ್ತು ನೀರಿನ ಸಮಸ್ಯೆಯ ಮಧ್ಯೆಯೂ ತಾಲ್ಲೂಕಿನ ರೇಷ್ಮೆ ಬೆಳೆಗಾರರು ಈ ವರ್ಷ ದಾಖಲೆ ಪ್ರಮಾಣದಲ್ಲಿ ಬೈವೋಲ್ಟೇನ್ (ಬಿಳಿಗೂಡು) ಉತ್ಪಾದನೆ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಆಶಾಕಿರಣ ಮೂಡಿಸಿದ್ದಾರೆ.
ತಾಲ್ಲೂಕಿನಲ್ಲಿ ಹೆಚ್ಚಾಗಿ ಸಿಆರ್ಎಂ ಎಂಬ ಸಂಸ್ಕರಣ ತಳಿ ರೇಷ್ಮೆಗೂಡು ಉತ್ಪಾದನೆ ಮಾಡಲಾಗುತ್ತಿದೆ. 2000 ವೇಳೆಯಿಂದಲೂ ಇಲ್ಲಿ ಬಿಳಿತಳಿ ಗೂಡು ಉತ್ಪಾದನೆ ಮಾಡಲಾಗುತ್ತಿದೆ, 2000ರಲ್ಲಿ 246 ಹೆಕ್ಟೇರ್ನಲ್ಲಿ ನಾಟಿ ಮಾಡಲಾಗಿತ್ತು, 2007–08 ರಿಂದ ನಾಟಿ ಪ್ರಮಾಣ ಏರಿಕೆಯಾಯಿತು ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅಂಕಿ– ಅಂಶಗಳ ಪ್ರಕಾರ ಕಳೆದ ವರ್ಷ90 ಸಾವಿರ ಮೊಟ್ಟೆ ಚಾಕಣೆ ಮಾಡಲಾಗಿದ್ದು, 50 ಟನ್ ರೇಷ್ಮೆಗೂಡು ಉತ್ಪಾದನೆ ಮಾಡಲಾಗಿತ್ತು. ಈ ಮೂಲಕ ಸರಾಸರಿ100 ಮೊಟ್ಟೆಗೆ 64 ಕೆಜಿ ಗೂಡು ಉತ್ಪಾದನೆ ಮಾಡಲಾಗಿದೆ.
ಈ ವರ್ಷ ಆಗಸ್ಟ್ ಅಂತ್ಯಕ್ಕೆ 85 ಸಾವಿರ ಮೊಟ್ಟೆ ಚಾಕಣೆ ಮಾಡಲಾಗಿದ್ದು, 56 ಟನ್ ಬಿಳಿಗೂಡು ಉತ್ಪಾದನೆ ಮಾಡಲಾಗಿದೆ, ಸರಾಸರಿ ಲೆಕ್ಕಾಚಾರದಲ್ಲಿ ಈ ವರ್ಷ 100 ಟನ್ ಗೂಡು ಉತ್ಪಾದನೆಯಾಗುವ ಅಂದಾಜಿದೆ. ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 80 ಟನ್ ಗೂಡು ಉತ್ಪಾದನೆ ಮಾಡಲಾಗಿತ್ತು, ಆದರೆ ಈ ಬಾರಿ ಮೊಳಕಾಲ್ಮುರು ತಾಲ್ಲೂಕು ಒಂದರಲ್ಲಿಯೇ 100 ಟನ್ ಉತ್ಪಾದನೆಯಾಗುವ ಮೂಲಕ ದಾಖಲೆ ಪ್ರಮಾಣ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರಾಮನಗರ ಮಾರುಕಟ್ಟೆಯಲ್ಲಿ ಬಿ.ಜಿ.ಕೆರೆ ರೇಷ್ಮೆಗೂಡಿಗೆ ಅತ್ಯಂತ ಬೇಡಿಕೆ ಇದೆ, ತಮಿಳುನಾಡಿನ ಗೂಡಿಗಿಂತಲೂ ಹೆಚ್ಚಿನ ಬೇಡಿಕೆ ಇದ್ದು, ಬಿ.ಜಿ.ಕೆರೆ ಸುತ್ತಮುತ್ತಲ ಬಿಳಿಗೂಡು ಸಾಮಾನ್ಯ ದರಕ್ಕಿಂತಲೂ ಪ್ರತಿ ಕೆಜಿಗೆ
` 30ರಿಂದ40 ವರೆಗೆ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಈಗ ` 360–480 ವರೆಗೆ ದರವಿದ್ದು ಕೊಂಡ್ಲಹಳ್ಳಿಯ ರೈತನೊಬ್ಬ ಕಳೆದ ತಿಂಗಳು ಪ್ರತಿ ಕೆಜಿಯನ್ನು ` 498ಕ್ಕೆ ಮಾರಾಟ ಮಾಡಿದ್ದಾರೆ ಎಂದರು.
ಇಲ್ಲಿನ ಬೆಳೆಗಾರರ ಶ್ರದ್ಧೆ, ಶಿಸ್ತು ಮತ್ತು ನೂತನ ತಾಂತ್ರಿಕತೆ ಅಳವಡಿಕೆ ಇದಕ್ಕೆ ಮುಖ್ಯ ಕಾರಣವಾಗಿದೆ. ಉತ್ತರ ಕರ್ನಾಟಕದ ನೂರಾರು ರೈತರನ್ನು ಇಲ್ಲಿನ ತೋಟಗಳಿಗೆ ಕರೆದುಕೊಂಡು ಬಂದು ರೇಷ್ಮೆಬೆಳೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಅಂತರ್ಜಲ ಸಮಸ್ಯೆ ತೀರಿದಲ್ಲಿ ಮತ್ತಷ್ಟು ಅಭಿವೃದ್ಧಿ ನಿರೀಕ್ಷೆ ಮಾಡಬಹುದಾಗಿದೆ ಎನ್ನುತ್ತಾರೆ ಬೆಳೆಗಾರರು ಮತ್ತು ರೈತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.