ಬೀದರ್: ತಾಲ್ಲೂಕಿನ ಮಿರ್ಜಾಪುರ (ಕೆ) ಸರ್ಕಾರಿ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.
ಶಾಲೆಯಲ್ಲಿ ಗ್ಯಾಸ್ ಮುಗಿದ ಹಿನ್ನೆಲೆಯಲ್ಲಿ ಆವರಣದಲ್ಲಿಯೇ ಸೌದೆ ಮೇಲೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು. ಹೀಗಾಗಿ ನೇರ ಬಿಸಿಯೂಟದತ್ತ ಧಾವಿಸಿದರು.
ಬಿಸಿಯೂಟ ಸಿದ್ಧಪಡಿಸುವಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆಯೇ ಎಂದು ಸಿಬ್ಬಂದಿಗೆ ಪ್ರಶ್ನಿಸಿದರು. ಅಲ್ಲದೇ ಸ್ವತಃ ಸೌಟು ಹಿಡಿದು ಸಾಂಬಾರದ ರುಚಿ ಪರೀಕ್ಷಿಸಿದರು.
ಗುಣಮಟ್ಟದ ಬೇಳೆ, ತರಕಾರಿ, ಎಣ್ಣೆ ಬಳಸಿ ಉತ್ತಮ ಆಹಾರ ಸಿದ್ಧಪಡಿಸುವಂತೆ ಸೂಚಿಸಿದರು. ಕಳಪೆ ಬಿಸಿಯೂಟ ಸಿದ್ಧಪಡಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಶಾಸಕ ರಹೀಮ್ಖಾನ್ ಅವರು ಸಹ ಬಿಸಿಯೂಟದ ಸಾಮಗ್ರಿಗಳನ್ನು ಪರಿಶೀಲಿಸಿದರು. ನಂತರ ಜಲನಿರ್ಮಲ ಯೋಜನೆಯಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಓವರ್ಹೆಡ್ ಟ್ಯಾಂಕ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಕೆಲ ವರ್ಷಗಳೇ ಕಳೆದರೂ ಇದುವರೆಗೆ ಹನಿ ನೀರು ಹರಿದಿಲ್ಲ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.ಕೂಡಲೇ ವಾಲ್ ಚೇಂಬರ್ ದುರಸ್ತಿ ಮಾಡಿ ಕೂಡಲೇ ಗ್ರಾಮದಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿಯ ಪಂಚಾಯತ್ರಾಜ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಪಾಟೀಲ್, ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಬಿ. ಸುಧಾ, ಸದಸ್ಯ ಸರ್ದಾರ್ಮಿಯ್ಯ, ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಸಿರಂಜೆ, ಪ್ರಮುಖರಾದ ಭೀಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ನಂತರ ಜಾಂಪಾಡ ಗ್ರಾಮದ ವಾಟರ್ ಟ್ಯಾಂಕ್ಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿಯು ಜಲನಿರ್ಮಲ ಯೋಜನೆಯಡಿ ಟ್ಯಾಂಕ್ ನಿರ್ಮಿಸಿದ್ದರೂ ಬಳಕೆಗೆ ಬರುತ್ತಿಲ್ಲ ಎಂದು ಜನ ದೂರಿದರು. ಒಂದೆರಡು ದಿನದಲ್ಲಿ ಟ್ಯಾಂಕ್ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಎ.ಇ.ಇ. ಅವರಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.