ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದ ಸಾಂಬಾರಿಗೆ ಬಿದ್ದ ಮಗು

Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಎರಡೂವರೆ ವರ್ಷದ ಗಂಡು ಮಗು ಮನೋಜ್‌­ಗೌಡ  ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದೆ.

ಹಿನ್ನೆಲೆ: ಬ್ಯಾಲಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ 24 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಅದೇ ಗ್ರಾಮದ ಮಂಜುಳಾ ಎಂಬುವವರು ಅಡುಗೆ ಸಹಾಯಕಿ­ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಸಿಯೂಟ ತಯಾರಿಸುತ್ತಿದ್ದ ಸಂದರ್ಭ­ದಲ್ಲಿ ತಮ್ಮ ಮಗುವನ್ನು ಜತೆಯಲ್ಲೇ ಕರೆದೊಯ್ಯುತ್ತಿದ್ದರು.

ಎಂದಿನಂತೆ ಶುಕ್ರವಾರ ಅಡುಗೆ ತಯಾರಿಸುತ್ತಿದ್ದ ವೇಳೆ ಮಂಜುಳಾ ಮಗುವನ್ನು ತನ್ನ ಜತೆಯಲ್ಲೇ ಇರಿಸಿ­ಕೊಂಡಿದ್ದರು.

ಸಾಂಬಾರು ತಯಾ­­ರಾದ ನಂತರ ಪಾತ್ರೆ­ಯನ್ನು ಸ್ಟೌನಿಂದ ಕೆಳಗಿಳಿಸಿ ಸಾಂಬಾರು ಬಿಸಿ ಆರಲಿ ಎಂದು ಮುಚ್ಚಳ ತೆರೆದಿಟ್ಟಿದ್ದರು. ಆ ನಂತರ ಅನ್ನ ಮಾಡಲು ಅಕ್ಕಿಯಿದ್ದ ಪಾತ್ರೆಯನ್ನು ಸ್ಟೌ ಮೇಲೆ ಇರಿಸುವ ವೇಳೆ ಆಕೆ ಬಳಿ ಇದ್ದ ಮಗು ಆಯ ತಪ್ಪಿ ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದಿದೆ.

ಮಗುವಿನ ಶರೀರ ಬಹುತೇಕ ಸುಟ್ಟಿದೆ. ಪಟ್ಟಣದ ಖಾಸಗಿ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ­ಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೌಕರ್ಯವಿಲ್ಲದ ಅಡುಗೆ ಕೋಣೆ:  1996ರಲ್ಲಿ ನಿರ್ಮಾಣಗೊಂಡ ಇಲ್ಲಿನ ಅಡುಗೆ ಕೊಣೆ ಕಳಪೆ ಮಟ್ಟದ್ದಾಗಿದ್ದು, ಅಡುಗೆ ತಯಾರಿ­ಸಲು ಕಟ್ಟೆ ಸಹ ಇಲ್ಲ. ‘ನೆಲದ ಮೇಲೆ ಸ್ಟೌ ಹಚ್ಚಿ ಅಡುಗೆ ತಯಾರಿಸುವುದು, ನಂತರ ಅಡುಗೆ­ಯನ್ನು ನೆಲದ ಮೇಲೆ ಇಟ್ಟು ಮುಚ್ಚಳ ತೆಗೆದಿಡುವು­ದರಿಂದ ಇಂತಹ ಘಟನೆ ಸಂಭವಿಸಿದೆ.

ಸಂಬಂಧ ಪಟ್ಟ ಇಲಾಖೆ ಅಡುಗೆ ಕೋಣೆಯನ್ನು ನಿರ್ಮಿಸುವಾಗ ಕಟ್ಟೆಗಳನ್ನು ನಿರ್ಮಿಸುವಂತೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮೂಹ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿದೇವಮ್ಮ, ಸಮನ್ವಯಾ­ಧಿಕಾರಿ ಜಮೀರ್‌ ಪಾಷ, ಶಾಲೆಗೆ ಭೆೇಟಿ ನೀಡಿ ಪರಿಶೀಲಿಸಿ­ದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಡಿ ಪಾಳ್ಯದಲ್ಲಿ ಇತ್ತೀಚೆಗೆ ಮಗುವೊಂದು ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT