ಮಾಲೂರು: ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಎರಡೂವರೆ ವರ್ಷದ ಗಂಡು ಮಗು ಮನೋಜ್ಗೌಡ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದೆ.
ಹಿನ್ನೆಲೆ: ಬ್ಯಾಲಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ 24 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಅದೇ ಗ್ರಾಮದ ಮಂಜುಳಾ ಎಂಬುವವರು ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಸಿಯೂಟ ತಯಾರಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗುವನ್ನು ಜತೆಯಲ್ಲೇ ಕರೆದೊಯ್ಯುತ್ತಿದ್ದರು.
ಎಂದಿನಂತೆ ಶುಕ್ರವಾರ ಅಡುಗೆ ತಯಾರಿಸುತ್ತಿದ್ದ ವೇಳೆ ಮಂಜುಳಾ ಮಗುವನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದರು.
ಸಾಂಬಾರು ತಯಾರಾದ ನಂತರ ಪಾತ್ರೆಯನ್ನು ಸ್ಟೌನಿಂದ ಕೆಳಗಿಳಿಸಿ ಸಾಂಬಾರು ಬಿಸಿ ಆರಲಿ ಎಂದು ಮುಚ್ಚಳ ತೆರೆದಿಟ್ಟಿದ್ದರು. ಆ ನಂತರ ಅನ್ನ ಮಾಡಲು ಅಕ್ಕಿಯಿದ್ದ ಪಾತ್ರೆಯನ್ನು ಸ್ಟೌ ಮೇಲೆ ಇರಿಸುವ ವೇಳೆ ಆಕೆ ಬಳಿ ಇದ್ದ ಮಗು ಆಯ ತಪ್ಪಿ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿದೆ.
ಮಗುವಿನ ಶರೀರ ಬಹುತೇಕ ಸುಟ್ಟಿದೆ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೌಕರ್ಯವಿಲ್ಲದ ಅಡುಗೆ ಕೋಣೆ: 1996ರಲ್ಲಿ ನಿರ್ಮಾಣಗೊಂಡ ಇಲ್ಲಿನ ಅಡುಗೆ ಕೊಣೆ ಕಳಪೆ ಮಟ್ಟದ್ದಾಗಿದ್ದು, ಅಡುಗೆ ತಯಾರಿಸಲು ಕಟ್ಟೆ ಸಹ ಇಲ್ಲ. ‘ನೆಲದ ಮೇಲೆ ಸ್ಟೌ ಹಚ್ಚಿ ಅಡುಗೆ ತಯಾರಿಸುವುದು, ನಂತರ ಅಡುಗೆಯನ್ನು ನೆಲದ ಮೇಲೆ ಇಟ್ಟು ಮುಚ್ಚಳ ತೆಗೆದಿಡುವುದರಿಂದ ಇಂತಹ ಘಟನೆ ಸಂಭವಿಸಿದೆ.
ಸಂಬಂಧ ಪಟ್ಟ ಇಲಾಖೆ ಅಡುಗೆ ಕೋಣೆಯನ್ನು ನಿರ್ಮಿಸುವಾಗ ಕಟ್ಟೆಗಳನ್ನು ನಿರ್ಮಿಸುವಂತೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಮೂಹ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿದೇವಮ್ಮ, ಸಮನ್ವಯಾಧಿಕಾರಿ ಜಮೀರ್ ಪಾಷ, ಶಾಲೆಗೆ ಭೆೇಟಿ ನೀಡಿ ಪರಿಶೀಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಡಿ ಪಾಳ್ಯದಲ್ಲಿ ಇತ್ತೀಚೆಗೆ ಮಗುವೊಂದು ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.