ಬೀದರ್: ಕಬ್ಬು ಬೆಲೆ ನಿಗದಿ ಪ್ರಶ್ನೆ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ತೂಗುಯ್ಯಾಲೆಯಲ್ಲಿ ಇರುವಂತೆಯೇ, ಇತ್ತ ಪ್ರಸಕ್ತ ಸಾಲಿನಲ್ಲಿ ಕಬ್ಬು ಕೊರತೆಯಾಗುವ ಆತಂಕವನ್ನು ಎದುರಿಸುತ್ತಿರುವ ಮಹಾರಾಷ್ಟದ ಗಡಿಭಾಗದ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿ ಬೆಳೆದಿರುವ ಕಬ್ಬಿನತ್ತ ಕಣ್ಣು ಹಾಕುತ್ತಿವೆ.
ಸರ್ಕಾರ ಸದ್ಯ ಪ್ರಸಕ್ತ ಹಂಗಾಮಿಗೆ ಟನ್ಗೆ 2,200 ರೂಪಾಯಿ ತಾತ್ಕಾಲಿಕ ಬೆಲೆ ನಿಗದಿಪಡಿಸಿದೆ. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳು ಮತ್ತು ಮಾರುಕಟ್ಟೆಯ ಇತರೆ ಅಂಶಗಳನ್ನು ಆಧರಿಸಿ ತದನಂತರ ಅಂತಿಮ ಬೆಲೆ ನಿಗದಿಸುವ ಮಾತನ್ನಾಡಿದೆ. ಆದರೆ, ಈ ತಾತ್ಕಾಲಿಕ ಬೆಲೆ ತಮಗೆ ಒಪ್ಪಿಗೆ ಇಲ್ಲ ಎಂದು ರೈತ ಸಂಘಟನೆಗಳು ತಿರಸ್ಕರಿಸಿವೆ.
ಬೀದರ್ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಲ್ಲಿ ಕಬ್ಬು ಪ್ರಮುಖವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆ ಗುರಿ ಮೀರಿ ಬಿತ್ತನೆಯಾಗಿದೆ. ಇನ್ನೊಂದೆಡೆ, ಮಹಾರಾಷ್ಟ್ರದ ಗಡಿ ಭಾಗ ಲಾತೂರ್ನಲ್ಲಿರುವ ಕಾರ್ಖಾನೆಗಳು ಪ್ರಸಕ್ತ ವರ್ಷ ಕಬ್ಬು ಕೊರತೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯತ್ತ ಮುಖಮಾಡಿವೆ.
ಅಲ್ಲಿನ ಕಾರ್ಖಾನೆಗಳ ಪ್ರತಿನಿಧಿಗಳು ಜಿಲ್ಲೆಯಲ್ಲಿನ ರೈತರಿಗೆ ಕಬ್ಬು ಪೂರೈಸಲು ಮನವಿ ಮಾಡುತ್ತಿದ್ದು, ಟನ್ಗೆ 2,800 ರಿಂದ 3,000 ರೂಪಾಯಿವರೆಗೂ ಹಣ ಪಾವತಿಸುವ ಆಮಿಷ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸ್ವಲ್ಪಮಟ್ಟಿನ ಆತಂಕ ಮೂಡಿಸಿದ್ದು, ಕಬ್ಬು ಕೊರತೆಯ ಭೀತಿ ಎದುರಾಗಿದೆ.
ಈ ಬೆಳವಣಿಗೆಗಳ ಕುರಿತು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರನ್ನು ಸಂಪರ್ಕಿಸಿದರೆ, ~ಈ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ಪ್ರಸ್ತಾಪ ಬಂದರೆ ಪರಿಶೀಲಿಸುತ್ತೇನೆ. ಆದರೆ, ನಿಯಮದ ಅನುಸಾರ ಕಾರ್ಖಾನೆಗೆ ತನ್ನದೇ ವ್ಯಾಪ್ತಿ ಗುರುತಿಸಲಾಗಿರುತ್ತದೆ. ಆ ವ್ಯಾಪ್ತಿ ಮೀರಿ ಕಬ್ಬು ಪೂರೈಸಲು ಬರುವುದಿಲ್ಲ~ ಎಂದರು.
ಒಟ್ಟಿನಲ್ಲಿ, ಕಾರ್ಖಾನೆಗಳಿಗೆ ಅಸ್ತಿತ್ವ ಉಳಿಸಿಕೊಳ್ಳಲು ಕಬ್ಬು ಬೇಕು. ರೈತರಿಗೆ ತಾವು ಉಳಿಯಲು ಉತ್ತಮ ಬೆಲೆ ಬೇಕು ಎಂಬ ಸ್ಥಿತಿ ಇದೆ.