ಕೆಜಿಎಫ್: ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ರಾಬರ್ಟಸನ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪಿಚ್ಚರ್ಡ್ ರಸ್ತೆಯಿಂದ ಸೂರಜ್ಮಲ್ ವೃತ್ತದವರೆಗೂ ಕಾರ್ಯಕರ್ತರು ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಎತ್ತಿನ ಗಾಡಿಯಲ್ಲಿ ಬೈಕ್ ಇಟ್ಟು ಜನರ ಗಮನ ಸೆಳೆದರು. ನಂತರ ಸೂರಜ್ಮಲ್ ವೃತ್ತದಲ್ಲಿ ಸ್ವಲ್ಪ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕದ ಮಾಜಿ ಆಧ್ಯಕ್ಷ ವೆಂಕಟೇಶ್, ಕೇಂದ್ರ ಸರ್ಕಾರ ಸಾಮಾನ್ಯ ಜನರ ಜೀವನದ ಬಗ್ಗೆ ಕಾಳಜಿ ವಹಿಸಿಲ್ಲ. ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ; ಸೂಕ್ತ ಕ್ರಮ ಕೈಗೊಳ್ಳದೆ ಜನ ವಿರೋಧಿ ಸರ್ಕಾರವಾಗಿ ಪರಿವರ್ತನೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಚಳವಳಿ ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಮುಖಂಡ ಯಶವಂತರಾವ್ ಈ ಸಂದರ್ಭದಲ್ಲಿ ಮಾತನಾಡಿದರು. ಮುಖಂಡರಾದ ರಾಮಚಂದ್ರ, ನಗರಸಭೆ ಸದಸ್ಯರಾದ ರಮೇಶ್, ಶಿವಪ್ರಸಾದ್ನಾಯ್ಡು, ಸುರೇಶ್ನಾರಾಯಣ್, ಡಾ.ದಿನಕರನ್, ರವಿಕುಮಾರ್, ಸತ್ಯನಾರಾಯಣ, ಕೃಷ್ಣಪ್ಪ ನಾಯ್ಡು, ಜನಾರ್ಧನಬಾಬು ಹಾಜರಿದ್ದರು.