ಬೆಳಗಾವಿ: ನಗರದಲ್ಲಿ ಸೋಮವಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಮಳೆ ಸುರಿಯಿತು.
ಮಧ್ಯಾಹ್ನ ಸುಮಾರು ಮೂರು ಗಂಟೆಯ ಸುಮಾರಿಗೆ ಏಕಾಏಕಿ ಕಾರ್ಮೋಡ ಕವಿಯಿತು. ಸುಮಾರು 3.15ರ ಸಮೀಪ ತುಂತುರು ಮಳೆ ಆರಂಭವಾಯಿತು. ಕೆಲ ಕ್ಷಣಗಳಲ್ಲೇ ತೀವ್ರತೆ ಹೆಚ್ಚಿಸಿಕೊಂಡ ಮಳೆಯು ಅಬ್ಬರಿಸತೊಡಗಿತು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಸುರಿದ ಮಳೆಯಿಂದ ನಗರದಲ್ಲಿ ವಾಹನ ಸವಾರರು ಪರದಾಡುವಂತಾಯಿತು. ನಗರದ ಕೆಲ ಪ್ರದೇಶಗಳಲ್ಲಿ ಚರಂಡಿ ತುಂಬಿ ರಸ್ತೆಗಳ ಮೇಲೆ ನೀರು ಹರಿಯತೊಡಗಿತ್ತು. ಮಳೆಯ ಮುನ್ಸೂಚನೆ ಇಲ್ಲದೇ ಬಂದಿದ್ದ ಜನರು ತೊಯ್ಸಿಕೊಂಡು ಸಂಚರಿಸುವಂತಾಯಿತು.
ಸುರಿದ ಮಳೆಯಲ್ಲೇ ನೆನೆದುಕೊಂಡು ಶಾಲಾ- ಕಾಲೇಜು ಮಕ್ಕಳು ಮನೆಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಸಂಜೆಯವರೆಗೂ ಆಗಾಗ ತುಂತುರು ಮಳೆ ಸುರಿಯುತ್ತಿತ್ತು.
ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ `ಸುವರ್ಣ ಸೌಧ~ ಉದ್ಘಾಟನೆಯ ಸಮಾರಂಭದ ಸಿದ್ಧತೆಗೆ ಮಳೆಯು ಅಡ್ಡಿಪಡಿಸಿತು. ರಾಷ್ಟ್ರಪತಿಗಳು ಸಂಚರಿಸುವ ಹಿನ್ನೆಲೆಯಲ್ಲಿ ಅಂದಗೊಳಿಸಿದ್ದ ಚನ್ನಮ್ಮ ವೃತ್ತ ಸೇರಿದಂತೆ ಹಲವು ರಸ್ತೆಗಳಲ್ಲಿ ಮಳೆಯ ರಾಡಿ ನೀರು ಹರಿದಿತ್ತು.