ಹಟ್ಟಿ ಚಿನ್ನದ ಗಣಿ: ಲಿಂಗಸಗೂರು ತಾಲ್ಲೂಕಿನ ರೈತರು ಬೆಳೆದ ಸೂರ್ಯಕಾಂತಿ, ಸಜ್ಜೆ, ಎಳ್ಳು ಸೇರಿದಂತೆ ಮುಂತಾದ ಬೆಳೆಗಳು ಅತಿವೃಷ್ಟಿಗೆ ತುತ್ತಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರೈತ ಸಂಘದ ಮುಖಂಡರು ಶನಿವಾರ ಹಟ್ಟಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್. ಎನ್. ನಾಗರಾಜು ಅವರನ್ನು ಒತ್ತಾಯಿಸಿದರು.
ರಾಂಪೂರು ಏತನೀರಾವರಿ ಯೋಜನೆ ಕಾಮಗಾರಿಗಳು ಕಳಪೆಯಾಗಿ ಮಳೆಗೆ ಕೊಚ್ಚಿಹೋಗಿವೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇದರಿಂದಾಗಿ ಈ ಭಾಗದ ರೈತರ ನೀರಾವರಿ ಕನಸು ನುಚ್ಚು ನೂರಾಗಿದೆ.
ತಾಲ್ಲೂಕಿನಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆ ವತಿಯಿಂದ ನಿರ್ಮಿಸಿದ ರಸ್ತೆಗಳು ಒಂದೇ ತಿಂಗಳಲ್ಲಿ ಕಿತ್ತು ಹೋಗಿವೆ. ಕಳೆದ 3ರಿಂದ 5 ದಶಕಗಳಿಂದ ಸಾಗುವಳಿ ಮಾಡುತ್ತಿರುವ ಅತೀ ಸಣ್ಣ ರೈತರಿಗೆ ಪಟ್ಟಾ ನೀಡಬೇಕು. ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗ್ರ್ಯಾನೈಟ್ ಗಣಿಗಾರಿಕೆ ತಡೆಯಬೇಕು.
ಯುಕೆಪಿಯಲ್ಲಿ ರೈತರಿಂದ ಸ್ವಾಧೀನ ಪಡೆಸಿಕೊಂಡ 400 ಎಕರೆ ಭೂಮಿ ಪಾಳು ಬಿದ್ದಿದೆ. ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು. ಉದ್ಯೋಗ ಖಾತರಿ ಯೋಜನೆ ಸರಿಯಾಗಿ ಅನುಷ್ಠಾನಗೊಳದ ಕಾರಣ ಕೃಷಿ ಕೂಲಿಕಾರರು ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಕ್ರಮ ಜರುಗಿಸಬೇಕೆಂಬ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಬಸವರಾಜ ನಗನೂರು, ಹನುಮಂತ ಗಲಗ, ಚಿನ್ನಪ್ಪ ಕೊಟ್ರಕಿ, ಗೂಳಪ್ಪ ಜಾವಗಲ್, ಸಿದ್ದರಾಮ ದೇವತಗಲ್, ಬಾಬು ಭೂಪೂರ, ಶಿವಪ್ಪ ಮ್ಯಾಗೇರಿ, ರೇವಣ ಸಿದ್ದಪ್ಪ ಇದ್ದರು.