ಭಟ್ಕಳ: ನಾಲ್ಕು ದಿನಗಳ ಹಿಂದೆ ಮುರ್ಡೇಶ್ವರದ ಸಮುದ್ರದಲ್ಲಿ ನೀರು ಪಾಲಾಗಿದ್ದ ಬಾಲಕನ ಶವ ನೆರೆಯ ಬೈಂದೂರು ತಾಲ್ಲೂಕಿನ ಪಡುವರಿ ಗ್ರಾಮದ ದೊಂಬೆ ಸಮುದ್ರತೀರದಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ವಿಚಿತ್ರವೆಂದರೆ ಶವದ ಮುಖದ ಗುರುತು ಸರಿಯಾಗಿ ತಿಳಿಯದ ಪರಿಣಾಮ ಪತ್ತೆಯಾದವರ ಹೆಸರುಗಳು ಅದಲು ಬದಲಾಗಿದೆ. ಮೂರು ದಿನಗಳ ಹಿಂದೆ ಮುರ್ಡೇಶ್ವರದ ಸಮುದ್ರದಲ್ಲೇ ಪತ್ತೆಯಾದ ಮೃತದೇಹ ಗೌಂಡಿ ಕೆಲಸ ಮಾಡುವ ದಾದಾಸಾಬ್ ನೂರ್ಸಾಬ್ (17) ಎಂದು ಗುರುತಿಸಲಾಗಿತ್ತು. ಆದರೆ ಅದು ಎಸ್ಎಸ್ಎಲ್ಸಿ ವಿದ್ಯಾರ್ಥಿ ಮಹಮ್ಮದ್ ಹುಸೇನ್ ರಾಜಸಾಬ್ (16)ನದಾಗಿತ್ತು. ಬೈಂದೂರಿನಲ್ಲಿ ಪತ್ತೆಯಾದ ಬಾಲಕನನ್ನು ಬ್ಯಾಡಗಿ ತಾಲ್ಲೂಕಿನ ಗೌಂಡಿ ಕೆಲಸ ಮಾಡುವ ದಾದಾಸಾಬ್ ನೂರ್ ಸಾಬ್ (17) ಎಂದು ಗುರುತಿಸಲಾಗಿದೆ. ಶವ ಗುರುತು ಸಿಗದಷ್ಟು ಕೊಳೆತ ಸ್ಥಿತಿಯಲ್ಲಿದುದ್ದರಿಂದ ಶವದ ಗುರುತು ಅದಲು ಬದಲಾಗಿತ್ತು.
ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕ ದಾದಾಸಾಬ್ನ ಶವಪರೀಕ್ಷೆ ನಡೆಸಿ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಯಿತು. ವಿಶೇಷವೆಂದರೆ ಮೂರು ದಿನಗಳ ಹಿಂದೆ ತಮ್ಮ ಮಗನೇ ಎಂದು ತಪ್ಪಾಗಿ ತಿಳಿದುಕೊಂಡು ದಾದಾಸಾಬ್ನ ಶವವನ್ನು ದಫನ್ ಮಾಡಿದವರೇ ಪುನಃ ಗುರುವಾರ ಮುರ್ಡೇಶ್ವರಕ್ಕೆ ಬಂದು ನಿಜವಾದ ದಾದಾಸಾಬ್ನ ಶವವನ್ನು ದಫನ್ ಮಾಡಿದರು. ಮುರ್ಡೇಶ್ವರದ ಜಮಾತ್ನವರು ಕುಟುಂಬದವರಿಗೆ ಸಾಂತ್ವನ ಹೇಳಿ ಶವಸಂಸ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.