ಹುಬ್ಬಳ್ಳಿ: ನಗರದ ವಿಜಾಪುರ ರಸ್ತೆಯಿಂದ ಬೆಂಗಳೂರು ರಸ್ತೆವರೆಗೆ (ಎನ್ಎಚ್ 218ರಿಂದ ಎನ್ಎಚ್ 4ರವರೆಗೆ) ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಕುಸುಗಲ್ ರೈತ ಸೇವಾ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜಾಗತಿಕ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬಲವಂತದಿಂದ ಯಾವುದೇ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಹುಬ್ಬಳ್ಳಿ ಭಾಗದಲ್ಲಿ ಸರ್ಕಾರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದು ಏಕೆ ಎಂದು ಸಂಘದ ಮುಖಂಡರು ಪ್ರಶ್ನಿಸಿದ್ದಾರೆ.
ಬೈಪಾಸ್ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರದ ಉದ್ದೇಶಿತ ಮಾರ್ಗ ಅವೈಜ್ಞಾನಿಕವಾಗಿದೆ. ಬೈಪಾಸ್ ಉದ್ದ ಒಟ್ಟಾರೆ 12 ಕಿ.ಮೀ. ಇದೆ. ಈಗಾಗಲೇ 6 ಕಿ.ಮೀ. ಉದ್ದದ ಕುಸುಗಲ್-ಹಳ್ಯಾಳ ರಸ್ತೆ ಇದೆ. ಆ ರಸ್ತೆಯ ಅಗಲೀಕರಣ ಮಾಡಿ, ಉಳಿದ ಮಾರ್ಗವನ್ನು ನಿರ್ಮಾಣ ಮಾಡಿದರೆ ರೈತರ ಫಲವತ್ತಾದ ಭೂಮಿಯೂ ಉಳಿಯುತ್ತದೆ ಎಂದು ೀಳಿದ್ದಾರೆ.
ಬೈಪಾಸ್ಗೆ ಸರ್ವೆ ಮಾಡುವಾಗ ಕುಸುಗಲ್-ಹಳ್ಯಾಳ ರಸ್ತೆಯನ್ನು ಅಧಿಕಾರಿಗಳು ಗಮನಿಸದೇ ಇದ್ದದ್ದು, ಅವರ ಬೇಜವಾಬ್ದಾರಿತನ ತೋರುತ್ತದೆ. ಈ ಸರ್ವೆ ವರದಿ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಕುಮ್ಮಕ್ಕು ಇರುವಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸುವಂತೆಯೂ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಭರವಸೆ ಇಲ್ಲವೆ ಕ್ರಮ ಕೈಗೊಂಡ ಬಗೆಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಸಂಘದ ಮುಖಂಡ ಎಸ್.ಎಂ. ಹೊಸಮನಿ ತಿಳಿಸಿದ್ದಾರೆ