ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ಅರಣ್ಯ ವಲಯದಲ್ಲಿ ಬೋನಿಗೆ ಬ್ದ್ದಿದ ಗಂಡು ಹುಲಿಗೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಶನಿವಾರ ಚಿಕಿತ್ಸೆ ನೀಡಲಾಯಿತು.
ಹುಲಿಯ ಬಲ ಕಿವಿಯ ಮೇಲ್ಭಾಗದಲ್ಲಿ `ಯು~ ಆಕಾರದಲ್ಲಿ ಗಾಯವಾಗಿದೆ. ಅರಣ್ಯದಲ್ಲಿ ಮತ್ತೊಂದು ಹುಲಿ ಜತೆಗೆ ಕಾದಾಡಿದ ಪರಿಣಾಮ ಇದು. ಹಿಂದೆ ಈ ಹುಲಿ ಐದು ದನಕರುಗಳನ್ನು ಕೊಂದಿತ್ತು. ಆನೆಚೌಕೂರು ವಲಯದ ಅರಣ್ಯ ಪ್ರದೇಶದಲ್ಲಿ ಬೋನು ಇರಿಸಿ ಇದನ್ನು ಹಿಡಿಯಲಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
`ಹುಲಿಯು ಅ. 19 ರಂದು ಹಸುವೊಂದನ್ನು ಕೊಂದು ಹಾಕಿತ್ತು. ಹಾಗಾಗಿ ಅದನ್ನು ಆಕರ್ಷಿಸಲು ಈ ಹಸುವಿನ ಶವವನ್ನೇ ಬೋನಿನಲ್ಲಿ ಇಡಲಾಗಿತ್ತು. ರಾತ್ರಿ 10 ಗಂಟೆ ವೇಳೆಗೆ ಹುಲಿ ಸೆರೆ ಸಿಕ್ಕಿದೆ. ಮೂಗಿನಿಂದ ಸ್ವಲ್ಪ ಮೇಲ್ಭಾಗದಲ್ಲಿ ಮೇಲ್ದುಟಿಗೆ ಪೆಟ್ಟಾಗಿದ್ದು, ಹುಳುಗಳಿಂದ ಕೂಡಿದ ತೀವ್ರ ಸ್ವರೂಪದ ಗಾಯವಿರುವುದು ಕಂಡು ಬಂದಿದೆ. ಹುಲಿಯ ಸ್ಥಿತಿ ಚಿಂತಾಜನಕವಾಗಿದ್ದು, ಅಗತ್ಯ ವೈದ್ಯೋಪಚಾರ ನೀಡಲಾಗುತ್ತಿದೆ~ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ.