ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ರಿಷಿಕೇಶ್ ಯಲಿಗಾರ್ ಇಲ್ಲಿ ನಡೆಯುತ್ತಿರುವ ಐಎಫ್ಸಿಐ ಅಖಿಲ ಭಾರತ ಮೇಜರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಹಂತಕ್ಕೆ ಪ್ರವೇಶಿಸಿದ್ದಾರೆ.
ಇಲ್ಲಿನ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಋಷಿಕೇಶ್ 21-14, 21-19ರಲ್ಲಿ ಆಂಧ್ರ ಪ್ರದೇಶದ ಜೆ.ಬಿ.ಎಸ್. ವಿದ್ಯಾಧರ ಅವರನ್ನು ಮಣಿಸಿದರು.
ಮಹಿಳೆಯರ ವಿಭಾಗದಲ್ಲಿ ಆತಿಥೇಯ ರಾಜ್ಯದ ಸಿಂಧು ಭಾರದ್ವಾಜ್ 21-13, 21-13ರಲ್ಲಿ ಚತ್ತೀಸಗಡದ ದೀಪಾಲಿ ಗುಪ್ತ ವಿರುದ್ಧ ಗೆಲುವು ಪಡೆದು ಪ್ರಧಾನ ಸುತ್ತು ಪ್ರವೇಶಿಸಿದರು.
ಇದೇ ಟೂರ್ನಿಯ ಪುರುಷರ ವಿಭಾಗದ ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಎನ್.ಎನ್. ವಿನಾಯಕ್ 16-21, 21-19, 21-17ರಲ್ಲಿ ಆಂಧ್ರ ಪ್ರದೇಶದ ಅಜಯ್ ಕುಮಾರ ಮೇಲೂ, ಮಹಾರಾಷ್ಟ್ರದ ಸಾಗರ್ ಚೊಪ್ಡಾ 21-14, 14-21, 21-18ರಲ್ಲಿ ಆಸ್ಸಾಂನ ಹರಿಕಾ ಜ್ಯೋತಿ ನಿಯೋಜ್ ವಿರುದ್ಧವೂ, ವಿಜಯ್ ಕುಮಾರ್ ರೆಡ್ಡಿ 21-12, 21-14ರಲ್ಲಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಮೇಲೂ ಜಯ ಸಾಧಿಸಿದರು.
ಆದಿತ್ಯ ಜೋಶಿ 17-21, 21-15, 21-14ರಲ್ಲಿ ಪ್ರೇಮ್ ಸಿಂಗ್ ಚವ್ಹಾಣ್ ವಿರುದ್ಧವೂ, ಆಂಧ್ರ ಪ್ರದೇಶದ ರೋಹಿತ್ ಯಾದವ್ 17-21, 21-9, 24-22ರಲ್ಲಿ ನೀಗಲ್ ಡಿಸೋಜಾ ಮೇಲೂ ಗೆಲುವು ಸಾಧಿಸಿದರು.