ಚಿಕ್ಕಬಳ್ಳಾಪುರ: ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ವಿಕೃತ ಮನೋಭಾವವೇ ಕಾರಣ ವಾಗಿದ್ದು, ಇದನ್ನು ನಿವಾರಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಭಗವದ್ಗೀತೆ ಅಭಿಯಾನ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ವಿಕೃತ ಮನೋಭಾವ ತೊರೆದು ಸಾಂಸ್ಕೃತಿಕ, ಸೌಹಾರ್ದ ವಾತಾವರಣ ರೂಪಿಸಿಕೊಳ್ಳಬೇಕು~ ಎಂದರು.
ರಾಜ್ಯದೆಲ್ಲೆಡೆ ಭಗವದ್ಗೀತಾ ಅಭಿಯಾನ ಕೈಗೊಳ್ಳಲಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಭಾವ ನಡುವೆಯೂ ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಅಭಿಯಾನದ ಸಂದೇಶವನ್ನು ಎಲ್ಲರಿಗೂ ಸಾರಲಾಗುವುದು ಎಂದು ಅವರು ತಿಳಿಸಿದರು.
ಭಗವದ್ಗೀತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಗುವುದು. ಮನೆ ಮನೆಗೂ ಭಗವದ್ಗೀತೆ ಪುಸ್ತಕ ವಿತರಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ವಾರ್ಡ್ಗಳಲ್ಲಿ ಸಂಘಸಂಸ್ಥೆಗಳ ಮೂಲಕ ಪ್ರಚಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ತಹಸಿಲ್ದಾರ್ ಪೂರ್ಣಿಮಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಯು.ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಚಂದ್ರಶೇಖರ್, ಅಭಿಯಾನದ ಅಧ್ಯಕ್ಷ ಟಿ.ಎಸ್.ವಿಜಯಶಂಕರ್, ಪ್ರಧಾನ ಸಂಚಾಲಕ ಎಂ.ವೇಣುಗೋಪಾಲ್, ಕಾರ್ಯದರ್ಶಿ ತ್ರಯಂಬಕ, ವಿ.ಜಿ.ಭಟ್, ಸುಬ್ಬರಾಮು ಮತ್ತಿತರರು ಉಪಸ್ಥಿತರಿದ್ದರು.