ಭಟ್ಕಳ (ಉ.ಕ. ಜಿಲ್ಲೆ): ದೇಶದ ವಿವಿಧೆಡೆ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿತನಾಗಿರುವ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಯಾಸೀನ್ ಭಟ್ಕಳನ (ಮೂಲ ಹೆಸರು ಅಹ್ಮದ್ ಜರ್ರಾರ್ ಸಿದ್ದಿಬಾಪಾ) ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಭಟ್ಕಳಕ್ಕೆ ಸದ್ಯದಲ್ಲೇ ಬರಲಿದೆ.
ಯಾಸೀನ್ ಮೇಲೆ ಯಾವುದೇ ಗುರುತರ ಪ್ರಕರಣ ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿಲ್ಲ. ಆದರೆ ಮೂಲತಃ ಭಟ್ಕಳದವನಾಗಿರುವುದರಿಂದ ಮತ್ತು ಆತನ ಕುಟುಂಬದವರು ಭಟ್ಕಳದಲ್ಲೇ ವಾಸವಾಗಿದ್ದರಿಂದ ಎನ್ಐಎ ತಂಡ ಇಲ್ಲಿ ಮಾಹಿತಿ ಸಂಗ್ರಹಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಎಲ್ಲೇ ಬಾಂಬ್ ಸ್ಫೋಟ ನಡೆದರೂ ತನಿಖೆಗಾಗಿ ಭಟ್ಕಳಕ್ಕೆ ಎ.ಟಿ.ಎಸ್. ತಂಡದವರು ಬಂದು ಭಟ್ಕಳ ಸಹೋದರರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಇದರ ನಡುವೆಯೇ, ಯಾಸೀನ್ ಹುಬ್ಬಳ್ಳಿಯೊಂದಿಗೆ ನಂಟು ಹೊಂದಿದ್ದಾನೆಂಬ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಹುಬ್ಬಳ್ಳಿಯ ಇಂಟರ್ನೆಟ್ ಕೇಂದ್ರವೊಂದರಲ್ಲಿ ತನಿಖೆ ನಡೆಸಿದ್ದಾರೆ.
ಆದರೆ `ಎನ್ಐಎ ತಂಡ ಬರುವ ಬಗ್ಗೆ ಯಾವುದೇ ಮಾಹಿತಿ ತಮಗೆ ಬಂದಿಲ್ಲ' ಎಂದು ಭಟ್ಕಳದ ಎ.ಎಸ್.ಪಿ ಸುಧೀರಕುಮಾರ ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.