ಬೆಂಗಳೂರು: ಮಲ್ಲೇಶ್ವರ ಐದನೇ ಅಡ್ಡರಸ್ತೆಯ ಇಂಡಿಯನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ನಡೆದಿದ್ದ ಕಳವು ಯತ್ನ ಪ್ರಕರಣ ಸಂಬಂಧ ಘಟಕದ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟಕದ ಭದ್ರತಾ ಸಿಬ್ಬಂದಿಯಾದ ನಾಗಸಂದ್ರದ ಸತೀಶ್ (23) ಮತ್ತು ಆತನ ಸಂಬಂಧಿಕ ಸಿದ್ದೇಶ್ (26) ಬಂಧಿತರು.
ಪ್ರಮುಖ ಆರೋಪಿ ಸತೀಶ್, ಗಿರೀಶ್ ಎಂಬ ಸ್ನೇಹಿತನ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ದುರ್ಬಳಕೆ ಮಾಡಿಕೊಂಡು ವಿಜಯನಗರದ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ್ದ. ಆ ಏಜೆನ್ಸಿಯವರು ಘಟನೆ ನಡೆಯುವುದಕ್ಕೂ ನಾಲ್ಕೈದು ದಿನಗಳ ಹಿಂದೆಯಷ್ಟೇ ಆತನನ್ನು ಇಂಡಿಯನ್ ಬ್ಯಾಂಕ್ ಎಟಿಎಂ ಘಟಕದ ಭದ್ರತೆಗೆ ನಿಯೋಜಿಸಿದ್ದರು ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಿದ್ದೇಶ್ನ ಮುಖಚರ್ಯೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ನಂತರ ಸತೀಶ್, ಕೆಲಸಕ್ಕೆ ಬರದೆ ತಲೆಮರೆಸಿಕೊಂಡಿದ್ದ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಆತ ಸೆಕ್ಯುರಿಟಿ ಏಜೆನ್ಸಿಗೆ ಕೊಟ್ಟಿದ್ದ ಅಂಕಪಟ್ಟಿಯ ಪ್ರತಿಯನ್ನು ಆಧರಿಸಿ ಗಿರೀಶ್ ಅವರನ್ನು ಪತ್ತೆ ಮಾಡಲಾಯಿತು. ಅವರ ನೆರವಿನಿಂದ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ಮತ್ತು ಮೊಬೈಲ್ ಕರೆಗಳ ಸುಳಿವು ಆಧರಿಸಿ ಲಗ್ಗೆರೆಯ ಬಳಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
‘ಎಟಿಎಂ ಘಟಕದಲ್ಲಿ ಹಣ ದೋಚುವ ಸಂಚು ವಿಫಲವಾಗಿದ್ದರಿಂದ ಆರೋಪಿಗಳು ಡಿ.30ರ ರಾತ್ರಿ ನೆಲಮಂಗಲದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮತ್ತು ಮಾದನಾಯ ಕನಹಳ್ಳಿ ಠಾಣೆ ವ್ಯಾಪ್ತಿಯ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಳವು ಮಾಡಲು ಯತ್ನಿಸಿದ್ದರು ಎಂದು ಉತ್ತರ ವಲಯದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.