ತರೀಕೆರೆ: ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗ ಹಾದು ಹೋಗುವ ಕಲ್ಲುಶೆಟ್ಟಿ ಹಳ್ಳಿಯಲ್ಲಿ ರೈತರ ಗಮನಕ್ಕೆ ಬಾರದೆ ಸಮೀಕ್ಷೆ ಮಾಡಲು ಮುಂದಾಗಿದ್ದ ನೀರಾವರಿ ನಿಗಮದ ಅಧಿಕಾರಿಗಳಿಗೆ ಬುಧವಾರ ರೈತರು ದಿಗ್ಭಂಧನ ಹಾಕಿ ಪ್ರತಿಭಟನೆ ನಡೆಸಿದರು.
ಮುನ್ಸೂಚನೆ ಇಲ್ಲದೆ ನಿಗಮದ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವುದನ್ನು ಗಮನಿಸಿದ ರೈತರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಎಸ್.ಎಂ.ನಾಗರಾಜ್ ರೈತರನ್ನು ಸಮಾಧಾನಪಡಿಸಿ ಅಧಿಕಾರಿಗಳಿಗೆ ಸರ್ವೆ ನಡೆಸದಂತೆ ತಾಕೀತು ಮಾಡಿದರು.
ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಭಾಗದ ರೈತರಿಗೆ ವಚನ ನೀಡಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ಸಂತ್ರಸ್ತ ರೈತರಿಗೆ ಪರ್ಯಾಯ ನೀರಾವರಿ ಸೌಲಭ್ಯವನ್ನು ಒದಗಿಸದೆ ಸುರಂಗ ಮಾರ್ಗ ತೋಡುವ ಕಾರ್ಯಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗ ತೋಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಭರವಸೆ ನೀಡಿದ್ದರು. ಆದರೆ ಈಗ ಭದ್ರಾ ಮೇಲ್ದಂಡೆ ಯೋಜನೆಯ ಸಂತ್ರಸ್ತರನ್ನು ಮರೆತು ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ~ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದರ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿನ ರೈತರ ಹಿತವನ್ನು ಬಲಿಕೊಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ವಿರೋಧವಿದೆ~ ಎಂದು ಅವರು ಸ್ಪಷ್ಟಪಡಿಸಿದರು.
ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಎಂ.ಲೋಹಿತ್, ರೈತ ಮುಖಂಡರಾದ ನಂಜುಂಡಪ್ಪ, ಗಂಗಾಧರಪ್ಪ ಸೇರಿದಂತೆ ಸೊಕ್ಕೆ, ಕಲ್ಲುಶೆಟ್ಟಿಹಳ್ಳಿ, ತಿಮ್ಮೋಪುರ ಮತ್ತು ರಂಗಾಪುರದ ನೂರಾರು ಗ್ರಾಮಸ್ಥರು ಇದ್ದರು.