ಬೆಳಗಾವಿ: ಶಾಂತಿ ಮತ್ತು ಅಭಿವೃದ್ಧಿ ಆಂತರಿಕ ಸಂಬಂಧ ಹೊಂದಿವೆ. ಇವರೆಡೂ ಜೊತೆಯಾಗಿ ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ರವಿ ನಾಯ್ಕ ಅಭಿಪ್ರಾಯಪಟ್ಟರು.
ನಗರದ ಭಾವುರಾವ್ ಕಾಕತ್ಕರ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಅಂತರರಾಷ್ಟ್ರೀಯ ಶಾಂತಿ ದಿನ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಭಯೋತ್ಪಾದನೆ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆ. ಈ ಕಾರಣಕ್ಕಾಗಿಯೇ ಆಂತರಿಕ ಭದ್ರತೆಗೆ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ. ಆದ್ದರಿಂದ ಹೊಸ ಜನಾಂಗ ಶಾಂತಿ ಕುರಿತು ಯೋಚಿಸಬೇಕು~ ಎಂದು ಹೇಳಿದರು.
`ಒಪ್ಪಂದ ಮನೋಭಾವ ಇದ್ದಾಗ ಮಾತ್ರ ಎಂತಹದೇ ಸಮಸ್ಯೆ ಇದ್ದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದ್ದರಿಂದ ಒಪ್ಪಂದ ಸ್ವಭಾವ ರೂಢಿಸಿಕೊಳ್ಳಬೇಕು~ ಎಂದು ಸಲಹೆ ಮಾಡಿದರು.
`ಶರಣರ ವಚನಗಳು ಶಾಂತಿ ದಾರಿಯಲ್ಲಿ ಸಾಗುವವರಿಗೆ ಮಾರ್ಗದರ್ಶಿಯಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದರು.
ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗುರುನಾಥ ಭೋರಿ, ಸಾಧನಾ ಪೋಟೆ, ಅಮಿತ ಕುಂದರಗಿ, ಅನ್ನಪೂರ್ಣ ನಿರ್ವಾಣಿ ಮತ್ತಿತರರು ಪಾಲ್ಗೊಂಡಿದ್ದರು. ಪ್ರಾಚಾರ್ಯ ಎಂ.ಎ. ಜಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶ ಐಹೊಳೆ ಸ್ವಾಗತಿಸಿದರು. ಮೀನಾ ಮೋಹಿತೆ ನಿರೂಪಿಸಿದರು. ಪ್ರೊ.ಎಂ.ಡಿ. ನಾಗಣ್ಣವರ ಪರಿಚಯಿಸಿದರು.
ಧರಣಿ ಸತ್ಯಾಗ್ರಹ ನಾಳೆ
ರಾಮದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ನ್ಯಾಯಾಂಗ ಗೌರವಿಸಲು ಮತ್ತು ಹಾಗೂ ನೈಸರ್ಗಿಕ ಸಂಪತ್ತು ಲೂಟಿಕೋರರ ಶಿಕ್ಷಿಸುವಂತೆ ಆಗ್ರಹಿಸಿ ಇದೇ 22 ರಂದು ರಾಮದುರ್ಗ ಪಟ್ಟಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.
ಗುರುವಾರ ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳುವ ರೈತರು ತಾಲ್ಲೂಕು ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಸಭೆ ನಾಳೆ: ರಾಮದುರ್ಗ ಮಹಾಂತೇಶ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಇದೇ 22 ರಂದು ಸಂಜೆ ಸಂಘದ ಕಾರ್ಯಾಲಯದಲ್ಲಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.