ಢಾಕಾ (ಪಿಟಿಐ): ಭಾರತ ಮತ್ತು ಬಾಂಗ್ಲಾ ದೇಶದ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ಜಂಟಿ ಕ್ರಿಯಾ ತಂಡದ ಮಾತುಕತೆ ಇಲ್ಲಿ ಮಂಗಳವಾರ ಆರಂಭವಾಯಿತು.
ಗೃಹ ಇಲಾಖೆಯ ಕಾರ್ಯದರ್ಶಿಗಳ ಮಾತುಕತೆಗೆ ಪೂರ್ವಭಾವಿಯಾಗಿ ಈ ಮಾತುಕತೆ ನಡೆದಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರ ಮತ್ತು ಉಭಯ ರಾಷ್ಟ್ರಗಳ ಗಡಿಯಲ್ಲಿ ಅಪ್ರಚೋದಿತ ಗುಂಡಿನ ಚಕಮಕಿ ಕುರಿತು ಪ್ರಸ್ತಾಪ ಆಗುವ ಸಾಧ್ಯತೆ ಇದೆ. ಗಡಿಯಲ್ಲಿನ ಪರಿಸ್ಥಿತಿ, ಗಡಿಯಾಚೆಗಿನ ಭದ್ರತೆ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಜಂಟಿ ಕ್ರಿಯಾ ತಂಡ ಒತ್ತು ನೀಡಲಿದೆ.
ಬಾಂಗ್ಲಾ ನಿಯೋಗದ ನೇತೃತ್ವವನ್ನು ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕಮಾಲುದ್ದೀನ್ ಅಹ್ಮದ್ ವಹಿಸಿದರೆ, ಭಾರತದ ನಿಯೋಗದ ನೇತೃತ್ವವನ್ನು ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಶಾಂಭು ಸಿಂಗ್ ವಹಿಸುವರು.