ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಗುರುಗುಂಟಾ ಹತ್ತಿರ ಸಿಡಿಲು ಬಡಿದು ತಿಪ್ಪಣ್ಣ ಎಂಬುವವರಿಗೆ ಸೇರಿದ ಮೂರು ಆಡುಗಳು ಮೃತಪಟ್ಟ ಘಟನೆ ವರದಿಯಾಗಿದೆ.ರೇಣುಕಾ ಎಂಬ ಬಾಲಕಿ ಆಡುಗಳನ್ನು ಕಾಯಲು ಹೋದ ಸಂದರ್ಭದಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಪರಿವೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಡುಗು, ಸಿಡಿಲು ಹಟ್ಟಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಮೇತ ಭಾರಿ ಮಳೆ ಸುರಿಯಿತು. ಭಾರಿ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿದವು. ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯ ಮಳೆ ಮಾಪನ ಕೇಂದ್ರದ ಪ್ರಕಾರ ಮೇ 30ರ ರಾತ್ರಿ 22 ಮಿ.ಮೀ. ಮಳೆಯಾಗಿದೆ. ಮೇ 29ರಂದು 15ಮಿ.ಮೀ. ಮಳೆ ಬಿದ್ದಿದೆ.
ಎರಡೇ ದಿನಗಳಲ್ಲಿ 37 ಮಿ.ಮೀ. ಮಳೆಯಾಗಿದೆ. 2011ರ ಜನವರಿಯಿಂದ ಇಲ್ಲಿವರೆಗೆ ಒಟ್ಟು 105 ಮಿ.ಮೀ. ಮಳೆಯಾಗಿದೆ. ಕಳೆದ 2010ಕ್ಕೆ ಹೋಲಿಸಿದರೆ ಇಷ್ಟೇ ಸಮಯದಲ್ಲಿ 31ಮಿ.ಮೀ ಮಳೆಯಾಗಿತ್ತು.
ಆರು ಕುರಿಗಳು ಬಲಿ
ಕವಿತಾಳ: ಮಂಗಳವಾರ ಬೆಳಿಗ್ಗೆ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ.ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಾಪುರದಲ್ಲಿ ಸಿಡಿಲು ಬಡಿದು ಆರು ಕುರಿಗಳು ಮೃತಪಟ್ಟಿವೆ.
ಬೆಳಿಗ್ಗೆ ಆರಂಭವಾದ ಭಾರಿ ಗುಡುಗು, ಸಿಡಿಲು ಸಹಿತ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು, ಕಾಚಾಪುರದ ದುರುಗನಗೌಡ ಎನ್ನುವವರಿಗೆ ಸೇರಿದ ಆರು ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಭಾರಿ ಮಳೆಯಿಂದಾಗಿ ಪಟ್ಟಣವೂ ಸೇರಿಂದತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಯಿತು. ಕೆಲವೆಡೆ ರಸ್ತೆ ಸಂಚಾರಕ್ಕೆ ತುಸು ಅಡಚಣೆಯೂ ಕಂಡುಬಂದಿತು. ಮಳೆಯ ಹೊಡೆತಕ್ಕೆ ಸಿಲುಕಿದ ಜನಜೀವನ ತುಸು ಅಸ್ತವ್ಯಸ್ತಗೊಂಡಿತು.