ಚನ್ನರಾಯಪಟ್ಟಣ: ತಾಲ್ಲೂಕಿನ ಅನೇಕ ಭಾಗಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನ ವರೆಗೆ ಜೋರಾಗಿ ಮಳೆ ಸುರಿದಿದೆ.
ದಂಡಿಗನಹಳ್ಳಿ ಹೋಬಳಿ ಆನೇಕೆರೆ ಗ್ರಾಮದಲ್ಲಿ ಬಿದ್ದ ಮಳೆಗೆ ನಾಗಮ್ಮ ಎಂಬುವರ ಮನೆಯ ಅಡುಗೆ ಕೋಣೆ, ಮನೆಯ ಹಜಾರದ ಮೇಲಿನ ಗೋಡೆ ಕುಸಿದಿದೆ. ಛಾವಣಿ ಬಿದ್ದ ಶಬ್ದಕ್ಕೆ ಮನೆಯಲ್ಲಿ ಮಲಗಿದ್ದ ನಾಗಮ್ಮ, ಮರೀಗೌಡ ದಂಪತಿ, ಮೊಮ್ಮಕ್ಕಳು ಎಚ್ಚರಗೊಂಡರು. ಅಡುಗೆ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ತಂದಿಟ್ಟುಕೊಂಡರು. ಆದರೆ ಮಳೆ ಸುರಿಯುತ್ತಿದ್ದುದರಿಂದ ಆಚೆ ಬರಲಾಗದೆ, ಒಳಗೆ ನೀರು ತುಂಬಿದ್ದರಿಂದ ಮಲಗಲೂ ಆಗದೆ ಮಂಚದ ಮೇಲೆ ಕುಳಿತುಕೊಂಡು ಕಾಲ ಕಳೆದರು.
ಈ ಭಾಗದಲ್ಲಿ ಕಳೆದ ನಾಲ್ಕು ತಿಂಗಳಿಂದ ಅಷ್ಟಾಗಿ ಮಳೆಯಾಗಿರಲಿಲ್ಲ. ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ರೈತರು ಹರ್ಷಗೊಂಡಿದ್ದಾರೆ. ಇದೇ ರೀತಿ ಮಳೆ ಮುಂದುವರೆದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಕೆರೆ, ಕಟ್ಟೆ ತುಂಬಿದರೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.