ಮುದ್ದೇಬಿಹಾಳ: ತಾಲ್ಲೂಕಿನ ಅಯ್ಯನಗುಡಿಯಲ್ಲಿ ಶ್ರೀ ಗಂಗಾಧರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ನೆರವೇರಿತು. ನೂರಾರು ವರ್ಷಗಳಿಂದ ನಡೆದು ಬಂದಿರುವ ಈ ಜಾತ್ರಾ ಮಹೋತ್ಸವ ದಲ್ಲಿ ಹಿಂದೂ ದೇವರಾದ ಗಂಗಾಧ ರೇಶ್ವರನಿಗೆ ಹಾಗೂ ಮುಸ್ಲಿಮ್ ದೇವರಾದ ಬಡೇಮಿಯಾಗೆ ಸಹ ಪೂಜೆ ಸಲ್ಲುವುದರಿಂದ ಕೋಮು ಸೌಹಾರ್ದಕ್ಕೆ ದೊಡ್ಡ ಕೊಡುಗೆ ನೀಡಿದೆ.
ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಉಭಯ ದೇವರಿಗೆ ವಿಶೇಷ ಪೂಜೆ ನಡೆದವು. ಬುಧವಾರ ರಾತ್ರಿ ದೇವರ ಗಡ್ಡೆಯಿಂದ ಶ್ರೀ ಗದ್ದೆವ್ವ ಹಾಗೂ ಹಾಲಬಾವಿಯಿಂದ ಶ್ರೀ ದ್ಯಾಮವ್ವ (ಸಹೋದರಿಯರನ್ನು) ದೇವಿಯರನ್ನು ಕರೆ ತಂದು ದೇವಸ್ಥಾನದ ಆವರಣದಲ್ಲಿ ರುವ ದೇಗುಲದಲ್ಲಿ ಪ್ರತಿಷ್ಠಾಪಿಸಲಾ ಗಿತ್ತು. ಗುರುವಾರ ಬೆಳಿಗ್ಗೆ ದೇವರ ಗದ್ದುಗೆಗೆ ನೂರಾರು ಭಕ್ತರು ಭೇಟಿ ನೀಡಿ ತಮ್ಮ ಹರಕೆ ತೀರಿಸುವುದರ ಜೊತೆಗೆ ತೆಂಗು ಒಡೆದು ಧನ್ಯತೆ ಮೆರೆದರು.
ನಾಲತವಾಡದ
ಸಂಗಣ್ಣ ಪತ್ತಾರ ಹಾಗೂ ಅವರ ಶಿಷ್ಯಂದಿರಿಂದ ಪುರವಂತಿಕೆಯ ಸೇವೆ ನಡೆಯಿತು. ದೇವಸ್ಥಾನದಿಂದ ಹೊರಟ ಪಲ್ಲಕ್ಕಿಯಲ್ಲಿ ಶ್ರೀ ಗಂಗಾಧರೇಶ್ವರ ಮೂರ್ತಿಯ ಮೆರವಣಿಗೆ ನಡೆಯಿತು. ಸಂಜೆ ಆರು ಗಂಟೆಗೆ ಶ್ರೀ ಗಂಗಾಧರೇಶ್ವರನ ರಥಕ್ಕೆ ಶಾಸಕ ಸಿ.ಎಸ್.ನಾಡಗೌಡ ಪೂಜೆ ಸಲ್ಲಿಸುವದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಸದ್ಭಕ್ತರು ತೇರಿಗೆ ಉತ್ತತ್ತಿ, ಕಬ್ಬು, ನಿಂಬೆ ಹಣ್ಣು, ಬಾಳೆಹಣ್ಣು ಎಸೆದು ಧನ್ಯತಾಭಾವ ಅನುಭವಿಸಿದರು.