ಖಾನಾಪುರ (ಬೆಳಗಾವಿ ಜಿಲ್ಲೆ): ವನ್ಯಜೀವಿ ಮಂಡಳಿ, ರಾಜ್ಯ ಸರ್ಕಾರ ಹಾಗೂ ಪಶ್ಚಿಮ ಘಟ್ಟಗಳ ಕಾರ್ಯಪಡೆ ಭೀಮಗಡ ಅರಣ್ಯವನ್ನು ಅಭಯಾರಣ್ಯವನ್ನಾಗಿ ಘೋಷಿಸಲು ನಿರ್ಧರಿಸಿದ್ದು, ಇದರಿಂದಾಗಿ ಅಲ್ಲಿಯ ಅಮೂಲ್ಯ ಅರಣ್ಯ ಸಂಪತ್ತಿನ ರಕ್ಷಣೆಯಾಗಲಿದೆ ಎಂದು ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಂಗಳವಾರ ಇಲ್ಲಿ ಹೇಳಿದರು.|
ತಾಲ್ಲೂಕಿನ ಮಲಪ್ರಭಾ ನದಿ ಉಗಮಸ್ಥಾನವಾದ ಕಣಕುಂಬಿ ಗ್ರಾಮದಲ್ಲಿ ಮಂಗಳವಾರ ಸಹ್ಯಾದ್ರಿ ಶ್ರೇಣಿಯ ನದಿಮೂಲಗಳ ಸಂರಕ್ಷಣಾ ಜಾಗೃತಿ ಅಭಿಯಾನದ ಉದ್ಘಾಟಿಸಿ ಮಾತನಾಡಿದರು.
ಕಾಡುಗಳ ಬದಲಿಗೆ ಕಾಂಕ್ರೆಟ್ ನಾಡುಗಳ ಅಭಿವೃದ್ಧಿ ಭರದಿಂದ ಸಾಗಿದೆ. ಅದ್ದರಿಂದ ಅರಣ್ಯ ರಕ್ಷಣೆಗೆ ಗ್ರಾಮಸ್ಥರು, ರೈತರು ಮತ್ತು ಸಾರ್ವಜನಿಕರ ಸಹಯೋಗವೂ ಬೇಕು ಎಂದರು. ಕರ್ನಾಟಕದಲ್ಲಿ ಶೇ.18ರಿಂದ 20 ಭಾಗ ಮಾತ್ರ ಅರಣ್ಯವಿದೆ ಎಂದು ಅತಿಥಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಹೇಳಿದರು.
ಶಾಸಕ ಪ್ರಹ್ಲಾದ ರೇಮಾನಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ರಾಮಚಂದ್ರ, ಜಿ.ಎನ್. ಪಾಟೀಲ, ದೊರೈಸ್ವಾಮಿ, ತಹಶೀಲ್ದಾರ ಬಿ.ಡಿ. ಗುಗ್ಗರಟ್ಟಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಬಾಲಕೃಷ್ಣ, ಬಿಇಓ ಹಳಂಗಳಿ, ಸಹಾಯಕ ಕೃಷಿ ನಿರ್ದೇಶಕ ಆರ್ ನಾರಾಯಣ ಸ್ವಾಮಿ ಇತರರು ಭಾಗವಹಿಸಿದ್ದರು.