ದೊಡ್ಡಬಳ್ಳಾಪುರ: ಸಮೀಪದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಭೂ ಚೇತನ ಯೋಜನೆಯಡಿ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು.
ಹೈದರಾಬಾದ್ನ ಅಂತರರಾಷ್ಟ್ರೀಯ ಅರೆ ಶುಷ್ಕ ಬೆಳೆ ಸಂಶೋಧನಾ ಕೇಂದ್ರದ ಭೂ ಚೇತನ ಯೋಜನೆ ಮುಖ್ಯ ಸಲಹೆಗಾರ ಡಾ. ಕೆ.ಕೃಷ್ಣಪ್ಪ ಮಾತನಾಡಿ, `ಭೂ ಚೇತನ ಯೋಜನೆ ರೈತರಿಗೆ ವರದಾನವಾಗಿದೆ. ಇದು ಮುಸುಕಿನ ಜೋಳದ ಇಳುವರಿ ಹೆಚ್ಚಿಸಲು ಸಹಕಾರಿಯಾಗಿದೆ ಎಂಬ ಅಂಶ ಪ್ರಾತ್ಯಕ್ಷಿಕೆಗಳಿಂದ ದೃಢಪಟ್ಟಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಡಾ.ಗೀತಹಳ್ಳಿ ಮಾತನಾಡಿ, ತೇವಾಂಶ ಕೊರತೆ ಬೆಳೆಗಳನ್ನು ಕಾಡಲಿದೆ. ಇದನ್ನು ಕಡಿಮೆ ಮಾಡಲು ಲಘು ಪೋಷಕಾಂಶಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯದ ವಿಜ್ಞಾನಿಗಳ ಮೇಲಿದೆ ಎಂದು ಹೇಳಿದರು.
ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೂ ಚೇತನ ಯೋಜನೆಯಡಿ ಸಾಧಿಸಿದ ಪ್ರಗತಿ ಬಗ್ಗೆ ಅವರು ಮಾಹಿತಿ ನೀಡಿದರು.
ಕೆವಿಕೆ ವಿಷಯ ತಜ್ಞೆ ಡಾ.ಸಿ.ಪಿ.ಮಂಜುಳಾ, ಡಾ. ಜಿ.ಎಂ. ಸುಜಿತ್, ಡಾ ಆನಂದ ಮಣೆಗಾರ್, ಜಂಟಿ ಕೃಷಿ ನಿರ್ದೇಶಕ ಕಚೇರಿ ರಾಮಲಿಂಗಯ್ಯ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಮರೆಡ್ಡಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.