ಮೊಳಕಾಲ್ಮುರು: ತಾಲ್ಲೂಕಿನ ನೇರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಏಕಾ-ಏಕಿ ಭೂಮಿ ಹದ್ದುಬಸ್ತು ಕಾರ್ಯಕ್ಕೆ ಮುಂದಾಗಿರುವುದನ್ನು ಖಂಡಿಸಿ ಸೋಮವಾರ ರೈತರು ಕಾರ್ಯಕ್ಕೆ ತಡೆದು ಪ್ರತಿಭಟನೆ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ಕೆ. ಜಗಳೂರಯ್ಯ ಮಾತನಾಡಿ, 1965ರಿಂದಲೂ ಇಲ್ಲಿ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರ ಖಾತೆ ಸಹ ಮಾಡಿಕೊಟ್ಟಿದೆ. 1991ರಲ್ಲಿ ಕೆಲ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ನೀಡಿದ್ದರೂ 1998-99ರಲ್ಲಿ ತಾಲ್ಲೂಕು ಆಡಳಿತ ಸಾಗುವಳಿ ಮಾಡುತ್ತಿದ್ದವರಿಗೆ ಸಾಗುವಳಿಪತ್ರ ವಿತರಣೆ ಮಾಡಿದ್ದು, ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಕೊನೆ ಪಕ್ಷ ಸರ್ವೇ ಮಾಡುವವರನ್ನು ಸಹ ಸ್ಥಳಕ್ಕೆ ಕರೆದುಕೊಂಡು ಬಾರದೇ ಅರಣ್ಯ ಇಲಾಖೆ ಅಧಿಕಾರಿಗಳು 'ಹಿಟಾಚಿ' ತೆಗೆದುಕೊಂಡು ಬಂದು ಹದ್ದುಬಸ್ತು ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ. ಸರ್ವೇ ಅಧಿಕಾರಿಗಳನ್ನು ಕರೆದುಕೊಂಡು ಬಂದು ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಜಮೀನು ಗುರುತಿಸಿಕೊಟ್ಟು ಉಳಿದ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಳ್ಳಲಿ. ಅದನ್ನು ಬಿಟ್ಟು ಬರಗಾಲ ಸಮಯದಲ್ಲಿ ಜಮೀನು ಕಿತ್ತುಕೊಳ್ಳುವ ಕಾರ್ಯಕ್ಕೆ ಅರಣ್ಯ ಇಲಾಖೆ ಏಕಾ-ಏಕಿ ಮುಂದಾಗಿರುವುದು ಖಂಡನೀಯ ಎಂದರು.
30ಕ್ಕೂ ಹೆಚ್ಚು ರೈತರು ಹಾಜರಿದ್ದರು. ಅರಣ್ಯ ಇಲಾಖೆಯ ರಾಮಚಂದ್ರಪ್ಪ ಹಾಜರಿದ್ದರು.