ಬೆಂಗಳೂರು: ‘ಭ್ರಷ್ಟಾಚಾರ ಮುಕ್ತ ರಾಷ್ಟ್ರದ ನಿರ್ಮಾಣಕ್ಕಾಗಿ ಯುವ ಜನಾಂಗದ ಬೆಂಬಲದೊಂದಿಗೆ ಹಂತ ಹಂತವಾಗಿ ರಾಜ್ಯದಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಸಂಘಟನೆಯ ಸದಸ್ಯ ನಾಗೇಂದ್ರರಾವ್ ತಿಳಿಸಿದರು. ‘ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳು ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ. ಪರಿಣಾಮ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.ರಾಜಕಾರಣಿಗಳು ಸಮಾಜವನ್ನು ಅವ್ಯವಸ್ಥೆಗೆ ದೂಡಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ತೆರಿಗೆ ಇಲಾಖೆ, ನ್ಯಾಯಾಲಯ ಮತ್ತು ಜನ ಸಂಘಟನೆಗಳ ಮೂಲಕ ಇದನ್ನು ತಡೆಯಬೇಕಿದೆ. ಮುಖ್ಯವಾಗಿ ಯುವಕರು ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕಿದೆ.ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಂಘಟನೆಯು 10 ಸಾವಿರ ಯುವಕರನ್ನು ತಯಾರು ಮಾಡುವ ಗುರಿ ಹೊಂದಿದೆ’ ಎಂದು ತಿಳಿಸಿದರು.
‘ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಿಣಿಗಳ ಮೇಲೆ ಮೊಕದ್ದಮೆ ದಾಖಲಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿಂದೇಟು ಹಾಕುತ್ತಿದ್ದಾರೆ. ಸ್ವಿಸ್ ಬ್ಯಾಂಕ್ನಲ್ಲಿ ಎಲ್ಲ ಪಕ್ಷಗಳ ನಾಯಕರು ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇಟ್ಟಿದ್ದಾರೆ. ಹಾಗಾಗಿ ಇದರ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಸಮಾಜದ ಒಳತಿಗಾಗಿ ಸಂಘಟನೆಯು ರಾಜ್ಯದಾದ್ಯಂತ ಆಂದೋಲನಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಿದೆ’ ಎಂದರು. ಸಂಘಟನೆಯ ಸದಸ್ಯ ಎ.ಡಿ.ದೇವರಾಜು ಉಪಸ್ಥಿತರಿದ್ದರು.