ಹೈದರಾಬಾದ್ (ಪಿಟಿಐ): ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು `ರಾಜಕೀಯ ಹಾಗೂ ಸಂವಿಧಾನಾತ್ಮಕ ಜವಾಬ್ದಾರಿ~ ಪ್ರದರ್ಶಿಸುವುದು ಅಗತ್ಯವಾಗಿದೆ ಎಂದು ಬಾಬಾ ರಾಮ್ದೇವ್ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ರಾಮ್ದೇವ್ ಸೋಮವಾರ ಇಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ತಮ್ಮ ಹೋರಾಟ ಬೆಂಬಲಿಸಲು ಮನವಿ ಮಾಡಿಕೊಂಡರು. ಅಧಿಕಾರದಲ್ಲಿರುವವರು ಭ್ರಷ್ಟಾಚಾರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಗೆ ಸಿದ್ಧರಾಗುತ್ತಿಲ್ಲ. ಹಾಗಾಗಿ ತಾವು ಹೋರಾಟದ ನೇತೃತ್ವ ವಹಿಸುವುದು ಅನಿವಾರ್ಯವಾಗಿದೆ ಎಂದರು.
ಚಿನ್ನದ ರೂಪದಲ್ಲಿ ಭಾರಿ ಮೊತ್ತದ ಕಪ್ಪು ಹಣ ನಮ್ಮಲ್ಲಿದೆ. ಅಧಿಕೃತವಾಗಿ 20000 ಟನ್ಗಳಷ್ಟು ಚಿನ್ನ ಎಂದು ಹೇಳಲಾಗುತ್ತಿದ್ದರೂ ಒಂದು ಲಕ್ಷ ಟನ್ಗಿಂತ ಅಧಿಕ ಮೊತ್ತದ ಚಿನ್ನ ನಮ್ಮಲ್ಲಿದೆ. ಚಿನ್ನದ ಜತೆಗೆ ಭೂಮಿ, ಗಣಿ, ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಕಪ್ಪು ಹಣ ಬಳಕೆ ಅಧಿಕವಾಗಿದೆ ಎಂದು ಬಾಬಾ ಹೇಳಿದರು.
ಇತ್ತೀಚೆಗೆ ಕಪ್ಪು ಹಣದ ಕುರಿತು ಸರ್ಕಾರ ಶ್ವೇತಪತ್ರವನ್ನೇನೊ ಹೊರಡಿಸಿದೆ. ಆದರೆ ಇದು ಸುಳ್ಳಿನ ಶ್ವೇತಪತ್ರ ಅಲ್ಲದೆ ಮತ್ತೇನೂ ಅಲ್ಲ ಎಂದರು.
ತಮ್ಮ ವಿರುದ್ಧ ಮಾಡಲಾದ `ಅಮೆರಿಕದ ಎಜೆಂಟ್~ ಎನ್ನುವ ಟೀಕೆಗೆ ಪ್ರತಿಕ್ರಿಸಿದ ಬಾಬಾ, ವಿದೇಶಗಳಿಂದ ತಮಗೆ ಯಾವುದೇ ನೆರವು ಬಂದಿಲ್ಲ, ಅಲ್ಲಿಂದ ಪ್ರಶಸ್ತಿಗಳನ್ನೂ ಸ್ವೀಕರಿಸಿಲ್ಲ ಎಂದರು.