ಬೀದರ್: ಹೆಣ್ಣು ಭ್ರೂಣ ಹತ್ಯೆ ತಡೆಗೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುದಾಳೆ ಅಭಿಪ್ರಾಯಟ್ಟರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ `ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಶಾಸನ~ ಕುರಿತು ಆರೋಗ್ಯ ಸೇವಾ ಕಾರ್ಯಕರ್ತರಿಗೆ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆರಿಗೆಗೆ ಮುನ್ನವೇ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದರಿಂದ ಸ್ತ್ರೀ ಮತ್ತು ಪುರುಷರ ಅನುಪಾತದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಭ್ರೂಣಲಿಂಗ ಪತ್ತೆ ಕುರಿತು ಜಾಗೃತರಾಗಬೇಕಿದೆ ಎಂದರು.
ಈಗಾಗಲೇ ಸರ್ಕಾರ ಶಿಶುಹತ್ಯೆಯ ಮಾಹಿತಿ ನೀಡಿದವರಿಗೆ 500 ರೂಪಾಯಿ ಬಹುಮಾನ ನೀಡುತ್ತಿದೆ. ಶಿಶುಹತ್ಯೆ ಸಾಬೀತಾದರೆ 5 ಸಾವಿರ ರೂಪಾಯಿ ಪುರಸ್ಕಾರ ಕೊಡಲಾಗುತ್ತದೆ. ಮಾಹಿತಿ ನೀಡಿದವರ ಹೆಸರನ್ನೂ ಗೌಪ್ಯವಾಗಿ ಇಡಲಾಗುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೈಶಾಲಿ ಮಾತನಾಡಿದರು. ವೈದ್ಯಾಧಿಕಾರಿ ಡಾ. ವಿಕ್ರಮ ಎಸ್. ದೇವಪ್ಪ, ಉಪ ಆರೋಗ್ಯ ಶಿಕ್ಷಣಾಧಿಕಾರಿ ವಾಮನರಾವ ವಾಘಮಾರೆ ಉಪಸ್ಥಿತರಿದ್ದರು.