ದಾವಣಗೆರೆ: ‘ನಿತ್ಯವೂ ಹೊಡೆಯುತ್ತಾರೆ, ನಿಂದಿಸುತ್ತಾರೆ’ ಎಂಬ ಮಕ್ಕಳ ಹೇಳಿಕೆ ಆಧರಿಸಿ ಬಳ್ಳಾರಿಯ ಬಾಲಕಿಯರ ಸರ್ಕಾರಿ ಬಾಲಮಂದಿರದ ಗೃಹಮಾತೆ ಶಾಂತಮ್ಮ ಅವರನ್ನು ಅಮಾನತುಗೊಳಿಸಿ, ವಿಚಾರಣೆಗೆ ಕ್ರಮ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಬಳ್ಳಾರಿಯ ಬಾಲಮಂದಿರದಿಂದ ಸೋಮವಾರ ಆರು ಮಕ್ಕಳು ತಪ್ಪಿಸಿಕೊಂಡಿದ್ದರು. ಈ ಪೈಕಿ ನಾಲ್ವರನ್ನು ಮಂಗಳವಾರ ಜಿಲ್ಲೆಯ ಹರಿಹರದ ರೈಲು ನಿಲ್ದಾಣದಲ್ಲಿ ಪೊಲೀಸರು ರಕ್ಷಿಸಿ, ರಾಜ್ಯ ಮಹಿಳಾ ನಿಲಯಕ್ಕೆ ಒಪ್ಪಿಸಿದರು. ಈ ವೇಳೆ ಮಾತನಾಡಿದ್ದ ಬಾಲಕಿಯರು, ‘ತಮಗೆ ಬಾಲಮಂದಿರದಲ್ಲಿ ನಿತ್ಯವೂ ಹಿಂಸೆ ನೀಡಲಾಗುತ್ತಿತ್ತು. ಇದರಿಂದಾಗಿ ಅಲ್ಲಿಂದ ತಪ್ಪಿಸಿಕೊಂಡಿದ್ದೇವೆ. ದಯವಿಟ್ಟು ಮತ್ತೆ ಅಲ್ಲಿಗೆ ಕಳುಹಿಸಬೇಡಿ’ ಎಂದು ಕೋರಿಕೊಂಡಿದ್ದರು.
ಈ ಬಗ್ಗೆ ಬುಧವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದರ ಆಧಾರದ ಮೇಲೆ ಬಳ್ಳಾರಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವರದಿ ಆಧರಿಸಿ, ಗೃಹಮಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.