ಮಡಿಕೇರಿ: ಮಡಿಕೇರಿ ದಸರಾ ಆಚರಣೆಗೆ 75 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷರಾದ ಕೆ.ಎಂ. ಗಣೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರನ್ನು ಭೇಟಿ ಮಾಡಿದ ನಂತರ ಕೆ.ಎಂ. ಗಣೇಶ್ ಈ ವಿಷಯ ಪ್ರಕಟಿಸಿದರು.
ನವರಾತ್ರಿಯ ಎಲ್ಲ ಒಂಬತ್ತೂ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ, ಸಾರಿಗೆ ಇಲಾಖೆಗಳ ಸಹಕಾರದೊಂದಿಗೆ ಇನ್ನಷ್ಟು ಜನಾಕರ್ಷಣೀಯವಾಗಿ ದಸರಾ ಆಚರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಮಿತಿಯ ಪ್ರಮುಖ ಎಚ್.ಎಂ. ನಂದಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮಾತನಾಡಿ, ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು. ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಉತ್ಸವವನ್ನು ಇನ್ನಷ್ಟು ಆಕರ್ಷಣೀಯ ಮಾಡಬೇಕೆಂದು ಅವರು ಸಲಹೆ ನೀಡಿದರು. ಉತ್ಸವಕ್ಕೆ ಸಂಬಂಧಿಸಿ ನಾನಾ ಭಾಗಗಳಿಗೆ ಮಾಹಿತಿ ತಲುಪಲು ವೆಬ್ಸೈಟ್ ಮೂಲಕ ಪ್ರಚಾರ ಕೈಗೊಳ್ಳಬೇಕು. ಉತ್ಸವದ ಕಾರ್ಯಕ್ರಮಗಳ ಬಗ್ಗೆ ಪ್ರತಿನಿತ್ಯ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡಬೇಕು ಎಂದು ಹೇಳಿದರು.
ಮಡಿಕೇರಿ ನಗರ ದಸರಾ ಸಂಬಂಧಿಸಿದ ಲೋಗೋ ತಯಾರಿಸಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಡುಗಡೆ ಮಾಡಿಸಬೇಕು. ಮಡಿಕೇರಿ ಮೈಸೂರು, ಬೆಂಗಳೂರು ಹಾಗೂ ಕರ್ನಾಟಕದ ಉತ್ತರ ಭಾಗ ಮತ್ತಿತರ ಕಡೆಗಳಲ್ಲಿ ಮಡಿಕೇರಿ ದಸರಾ ಬಗ್ಗೆ ಮಾಹಿತಿ ತಲುಪುವಂತಾಗಬೇಕು. ಮಡಿಕೇರಿ ದಸರಾವನ್ನು ಆಕರ್ಷಣೀಯವಾಗಿ ಜರುಗುವಂತಾಗಲು ಶ್ರಮಿಸಬೇಕು ಎಂದು ಅವರು ಸಲಹೆ ಮಾಡಿದರು. ಗೌರವಾಧ್ಯಕ್ಷರಾದ ವಿ.ಪಿ. ಸುರೇಶ್, ಕೋಡಿ ಚಂದ್ರಶೇಖರ್, ಚುಮ್ಮಿ ದೇವಯ್ಯ, ಉದಯಕುಮಾರ್, ಆಯುಕ್ತ ಎನ್.ಎಂ. ಶಶಿಕುಮಾರ್ ಇದ್ದರು.