ಬೆಂಗಳೂರು: `ನಮ್ಮ ಬೆಂಗಳೂರು ಪ್ರತಿಷ್ಠಾನ' ನೀಡುವ 2012ನೇ ಸಾಲಿನ `ವರ್ಷದ ಬೆಂಗಳೂರಿಗ' ಪ್ರಶಸ್ತಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್ ಆಯ್ಕೆಯಾಗಿದ್ದಾರೆ.
ನಮ್ಮ ಬೆಂಗಳೂರು ಪ್ರಶಸ್ತಿಗೆ ಒಟ್ಟು 61 ಸಾವಿರ ಹೆಸರು ನಾಮ ನಿರ್ದೇಶನಗೊಂಡಿತ್ತು. ಅದರಲ್ಲಿ `ವರ್ಷದ ಬೆಂಗಳೂರಿಗ' ಮತ್ತು 8 ವಿಭಾಗಗಳಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ.
ಸುಮನಹಳ್ಳಿ ಸೊಸೈಟಿ ಸ್ಥಾಪಕ ಫಾ.ಜಾರ್ಜ್ ಕನ್ನಂಥನಮ್ (ನಾಗರಿಕ ವಿಭಾಗ), ರೀಫ್ ಬೆನಿಫಿಟ್ ಸಂಸ್ಥೆಯ ಸಂಸ್ಥಾಪಕ ಕುಲದೀಪ್ ದಂತೆವಾಡಿಯಾ (ನಾಗರಿಕ ಯುವ ವಿಭಾಗ), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, ಸಂಚಾರ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಮಹಾದೇವ್ ಸಂಬರ್ಗಿ (ಸರ್ಕಾರಿ ನೌಕರ), ಪತ್ರಕರ್ತೆ ವೈ.ಎಸ್.ಸೀತಾಲಕ್ಷ್ಮಿ (ಮಾಧ್ಯಮ), ಶಾಸಕ ಬಿ.ಎನ್.ವಿಜಯ ಕುಮಾರ್ (ಚುನಾಯಿತ ಪ್ರತಿನಿಧಿ), ವಿಂಧ್ಯಾ ಇನ್ಫೊಟೆಕ್ನ ಪವಿತ್ರ.ವೈ.ಎಸ್ (ಸಾಮಾಜಿಕ ಉದ್ಯಮಿ), ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್ (ನಾಗರಿಕ ಸಂಘಟನೆ), ಬ್ರಿಟಾನಿಯಾ ಸಂಸ್ಥೆ (ಸಾಮಾಜಿಕ ಹೊಣೆಗಾರಿಕೆ), ಬೆಂಗಳೂರು ಸಂಚಾರ ಪೊಲೀಸ್ (ಸರ್ಕಾರಿ ಸಂಸ್ಥೆ) ಪ್ರಶಸ್ತಿ ಪಡೆದುಕೊಂಡಿವೆ.ಮಲ್ಲೇಶ್ವರ ಮೈದಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಪ್ರತಿಷ್ಠಾನದ ನಿರ್ದೇಶಕ ಸುಧಾಕರ್ ವಾರಣಾಸಿ, ಪತ್ರಕರ್ತರಾದ ನಾಗೇಶ್ ಹೆಗಡೆ, ಮಹೇಂದ್ರ ಮಿಶ್ರ, ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ತೀರ್ಪುಗಾರರಾದ ಅಶೋಕ್ ಸೂತ, ಎಚ್.ಎಸ್.ಬಲರಾಮ್, ಆರ್.ಕೆ.ಮಿಶ್ರ, ಸುಭಾಷಿನಿ ವಸಂತ್, ಸುದರ್ಶನ್ ಬಲ್ಲಾಳ್, ವಸಂತಿ ಹರಿಪ್ರಕಾಶ್, ಪ್ರದೀಪ್ ಖಾರ್ ಉಪಸ್ಥಿತರಿದ್ದರು.