ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣ ವಾಗಿ ಆಹಾರ ಉತ್ಪಾದಿಸಲು ಭೂಮಿಯ ಫಲವತ್ತತೆ ಹೆಚ್ಚಿಸ ಬೇಕು ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಸತ್ಯನಾರಾಯಣ ರೆಡ್ಡಿ ಹೇಳಿದರು.
ನಗರದ ನವುಲೆಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸಂಯುಕ್ತವಾಗಿ ಆಯೋಜಿಸಿದ್ದ ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಮುಸುಕಿನಜೋಳದ ಉತ್ಪಾದನಾ ತಂತ್ರಜ್ಞಾನಗಳು ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಫಲವತ್ತತೆ ಹೆಚ್ಚಿಸಿ, ಮಣ್ಣಿನ ರಕ್ಷಣೆ ಮಾಡಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದಕ್ಕೆ ಅನುಗುಣವಾಗಿ ಗೊಬ್ಬರವನ್ನು ಸರಿಯಾದ ಸಮಯದಲ್ಲಿ ಭೂಮಿಗೆ ಹಾಕಬೇಕು ಎಂದರು.
ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ಗಣೇಶ್ಬಾಬು ಮಾತನಾಡಿ, ಕೃಷಿ ಭೂಮಿಯಲ್ಲಿ ಏಕ ಬೆಳೆಯನ್ನು ಪ್ರತಿವರ್ಷ ಬೆಳೆಯದೆ, ಬೆಳೆ ಪರಿವರ್ತನೆ ಮಾಡಿದಲ್ಲಿ ಮಣ್ಣಿನ ಫಲವತ್ತತೆ ಕಾಪಾಡಬಹುದು ಉತ್ತಮ ಇಳುವರಿಯನ್ನೂ ಪಡೆಯಬಹುದು ಎಂದು ತಿಳಿಸಿದರು.
ಸ್ನಾತಕೋತ್ತರ ಡೀನ್ ಡಾ.ಟಿ.ಎನ್.ವಾಗೀಶ್ ಪ್ರಾಸ್ತವಿಕ ಮಾತನಾಡಿದರು. ಕೃಷಿ ಮಹಾವಿದ್ಯಾಲಯ ಡೀನ್ ಡಾ.ಎಂ.ಎಸ್.ವಿಘ್ನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಜಿ.ಆರ್.ರಾಮಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ಟಿ.ಎಸ್.ಗೌಡ ಉಪಸ್ಥಿತರಿದ್ದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಧಾನ ಪರಿಶೋಧಕ ಡಾ.ಎಚ್.ಕೆ.ವೀರಣ್ಣ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಜಿ.ಕೆ.ಗಿರಿಜೇಶ್ ಕಾರ್ಯಕ್ರಮ ನಿರೂಪಿಸಿದರು. ವಿಷಯ ತಜ್ಞ ಡಾ.ಬಸವರಾಜ ಬೀರಣ್ಣವರ್ ವಂದಿಸಿದರು.