ಶ್ರೀನಿವಾಸಪುರ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕು. ಯಾವುದೇ ಸಂದರ್ಭದಲ್ಲಿ ಆಮಿಷಗಳಿಗೆ ಬಲಿಯಾಗದೆ ತಮಗೆ ಸರಿಯೆನಿಸಿದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಕೆ.ಎನ್.ರಮಣಾರೆಡ್ಡಿ ಹೇಳಿದರು.
ತಾಲ್ಲೂಕಿನ ಕಶೆಟ್ಟಿಪಲ್ಲಿ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಮತದಾರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾವಂತ ಸಮುದಾಯ ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಮತದಾನದ ಮೂಲಕ ಮಾತ್ರ ನಾವು ಒಳ್ಳೆಯ ಪ್ರತಿನಿಧಿಯನ್ನು ಚುನಾಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕಿ ರಾಮರತ್ನ ಶೇಷಗಿರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಅದನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ನಾವು ಉತ್ತಮ ಆಡಳಿತಗಾರರನ್ನು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಮಂದಿ ಮತದಾನದಿಂದ ದೂರ ಉಳಿಯುವುದು ಸಾಮಾನ್ಯವಾಗಿದೆ. ಅದು ಆಯ್ಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು. ಮುಖಂಡರಾದ ಕಾಗತಿ ವೆಂಕಟಪ್ಪ, ತಾಡಿಗೋಳ್ ಸೀನಪ್ಪ, ತಿಮ್ಮನ್ನ, ದೊಡ್ಡಪ್ಪಗಾಗಿ ಮುನಿರೆಡ್ಡಿ, ಮುಖ್ಯ ಶಿಕ್ಷಕ ಸ.ರಘುನಾಥ. ಶಿಕ್ಷಕಿಯರಾದ ರಾಧಮ್ಮ, ಅನಸೂಯಮ್ಮ, ವರಲಕ್ಷ್ಮಿ, ಬಯಮ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು.