ಉಡುಪಿ: `ಮತೀಯ ಆಧಾರಿತ ಮೀಸಲಾತಿ ದೇಶದ ಏಕತೆ ಮತ್ತು ಅಖಂಡತೆಗೆ ಮಾರಕ. ಇದು ಧರ್ಮಗಳ ಮಧ್ಯೆ ಪ್ರತ್ಯೇಕವಾದವನ್ನು ಜಾಗೃತಗೊಳಿಸುತ್ತದೆ. ಇದರಿಂದ ದೇಶ ವಿಭಜನೆ ಭೀತಿ ಇದೆ. ಅಲ್ಲದೇ ಹಿಂದೂ ಸಮಾಜದ ಸಂವಿಧಾನದತ್ತ ಅಧಿಕಾರ ಹರಣವಾಗುತ್ತದೆ~ ಎಂದು ಬಜರಂಗದಳ ದೂರಿದೆ.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಬಜರಂಗದಳ ರಾಜ್ಯ ಘಟಕದ ಸಂಚಾಲಕ ಸೂರ್ಯನಾರಯಣ, `ಅಲ್ಪಸಂಖಾತರಿಗೆ ಈಗಾಗಲೇ ಸಾಕಷ್ಟು ಆಯೋಗಗಳು ರಚನೆಯಾಗಿವೆ. ಮತ್ತಷ್ಟು ಮೀಸಲಾತಿ ಕೇವಲ ಮತ ಬ್ಯಾಂಕ್ ರಾಜ ಕಾರಣ~ ಎಂದು ಅವರು ಆರೋಪಿ ಸಿದರು.
`ಹಿಂದೂ ಸಮಾಜದ ಹಿಂದುಳಿದ ವರ್ಗದವರಿಗೆ ನೀಡುತ್ತಿದ್ದ ಶೇ. 27 ಮೀಸಲಾತಿಯನ್ನು ಕಡಿತಗೊಳಿಸಿ, ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವಿರೋಧಿಸುತ್ತದೆ. ಹಿಂದುಳಿದ ವರ್ಗದ ಶೇ 27 ಮೀಸಲಾತಿಯಲ್ಲಿ ಶೇ 4.5ರಷ್ಟನ್ನು ಅಲ್ಪಸಂಖ್ಯಾತರಿಗೆ ನೀಡುವುದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಇದು ದೇಶ ವಿಭಜನೆಗೆ ಕಾರಣವಾಗಲಿದೆ ಎಂದು ಆರೋಪಿಸಿದರು.
`ನ್ಯಾ.ರಂಗನಾಥ ಮಿಶ್ರ ಹಾಗೂ ಸಾಚಾರ್ ಸಮಿತಿ ವರದಿಯನ್ನು ತಕ್ಷಣ ರದ್ದುಗೊಳಿಸಬೇಕು. , ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಬೇಕು. ಭಾರತದ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶವೇ ಇಲ್ಲ. ಮತ ಆಧಾರಿತ ಮೀಸಲಾತಿ ಕೇಳುವವರ ದೇಶದ್ರೊಹದ ಮೊಕದ್ದಮೆ ಹೊಡಬೇಕು~ ಎಂದರು.
`ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳವು ದೇಶಾದ್ಯಂತ ಆಂದೋಲನ ನಡೆಸಲಿದೆ. ಕಾಲೇಜುಗಳ ಬಳಿ ಗೇಟ್ ಮೀಟಿಂಗ್, ಕರಪತ್ರ ಹಂಚಿಕೆ, ಹಿಂದೂ ಸ್ವಾಮೀಜಿಗಳನ್ನು ಸೇರಿಸಿ ಆಂದೋಲನ ನಡೆಸಲಿದ್ದೇವೆ~ ಎಂದರು.
ಸುದ್ದಿಗೋಷ್ಥಿಯಲ್ಲಿ ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಬಜರಂಗದಳ ಉಡುಪಿ ಜಿಲ್ಲಾ ಸಂಚಾಲಕ ಸುನಿಲ್ ಕೆ.ಅರ್, ಬಜರಂಗದಳ ಉಡುಪಿ ಜಿಲ್ಲಾ ಸಹ ಸಂಚಾಲಕ ಸುಮೀತ್ ಇದ್ದರು.