ಯಳಂದೂರು: ತೆಂಗಿನ ಕೋಲುಮಟ್ಟೆಯಿಂದ ತಯಾರಾದ ಮುಖವಾಡ, ಗೋಣಿ ಚೀಲದಲ್ಲಿ ಅರಳಿದ ವಿವಿಧ ಭಾವಭಂಗಿಗಳ ಮುಖಗಳು, ಪ್ಲಾಸ್ಟಿಕ್ ಲೋಟಗಳಿಂದ ತಯಾರಾದ ಸುಂದರ ಕಲಾಕೃತಿ, ಕಿತ್ತು ಹೋದ ಚಪ್ಪಲಿಯಲ್ಲಿ ಅರಳಿದ ಅಲಂಕೃತ ವಸ್ತುಗಳು, ತ್ಯಾಜ್ಯವೆಂದು ಬೀಸಾಡುವ ವಸ್ತುಗಳಿಂದ ಅರಳಿನಿಂತ ಕಲೆ....
ಇವು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ನಾಟಕ ಹಾಗೂ ತ್ಯಾಜ್ಯ ವಸ್ತುಗಳಿಂದ ವಿದ್ಯಾರ್ಥಿಗಳೇ ತಯಾರಿಸಿದ ವಸ್ತು ಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳು.
ರಾಜ್ಯದಲ್ಲೇ ಹುಬ್ಬಳ್ಳಿ, ಧಾರವಾಡ, ಹಾವೇರಿ, ಕುಂದಾಪುರ, ಕೊಪ್ಪಳ ಶಾಲೆಗಳು `ಇಂಡಿಯನ್ ಫೌಂಡೇಶನ್ ಆಫ್ ಆರ್ಟ್ಸ್' ನೀಡುವ ನಾಟಕ ಪೆಲೋಷಿಫ್ ಅಡಿ ಆಯ್ಕೆಯಾಗಿವೆ.
ಇದರಲ್ಲಿ ಜಿಲ್ಲೆಯ ಗುಂಬಳ್ಳಿ ಶಾಲೆಯೂ ಒಂದು. 6 ತಿಂಗಳ ಕಾರ್ಯ ಗಾರಕ್ಕೆ ರೂ 75 ಸಾವಿರ ನೀಡುತ್ತದೆ. ಇದನ್ನು ಬಳಸಿ `ಕಲಿಕಲಿಸು' ಯೂಜನೆ ಯಡಿ ಅನುಪಯುಕ್ತ ವಸ್ತಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಬಹುದು. ಅತ್ಯುತ್ತಮ ರಚನೆಗೆ ಬಹುಮಾನವನ್ನು ನೀಡುತ್ತದೆ. ಭಾರತದಲ್ಲಿ ಪ್ರತಿ ವರ್ಷ 40 ದ.ಲ.ಟನ್ ತ್ಯಾಜ್ಯ ಹೂರ ಬೀಳು ತ್ತದೆ. ಇದು ಸುಂದರ ನಿಸರ್ಗ ಕಲುಷಿತ ಗೊಳ್ಳಲೂ ಕಾರಣ.
ಇಂತಹ ಕಸಕಡ್ಡಿ ಗಳನ್ನು ಪ್ರತ್ಯೇಕಿಸಿ ಶತ್ರುಕಸ ಹಾಗೂ ಮಿತ್ರಕಸಗಳಾಗಿ ವಿಂಗಡಿಸುವುದು. ಇವುಗಳಿಂದಲೇ ಸುಂದರ ಮಾದರಿಗಳನ್ನು ತಯಾರಿಸುವುದು. ಇದರಿಂದ ಆರ್ಥಿಕ ಮೌಲ್ಯ, ಪುನರ್ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು. ತಜ್ಞರಿಂದ ಕಥನ ವಿಧಾನದಿಂದ ಜೀವಂತ ಗ್ರಹದಲ್ಲಿ ಪರಿಸರದ ಉಳಿವಿನ ಬಗ್ಗೆ ಕತೆಗಳನ್ನು ಹೇಳಿಸುವುದು ಐಎಫ್ಎಯ ಉದ್ದೇಶ.
`ಇಲ್ಲಿನ ವಿದ್ಯಾರ್ಥಿಗಳು ಗ್ರಾಮೀಣರು ಬಿಸಾಡುವ ಹಳೇ ಪಾದರಕ್ಷೆ, ಪ್ಲಾಸ್ಟಿಕ್ ಬಾಟಲಿ, ಲೋಟ, ತೆಂಗಿನ ಗರಿ, ಕರಟ, ಹಳೇಬಟ್ಟೆ, ದಾರ ಬಳಸಿ ಮುಖವಾಡ, ಜೇಡ, ಹಾವು, ನವಿಲು, ರೋಬೋಟ್ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಇವೇ ಜಾನಪದ ನಾಟಕಗಳಿಗೂ ಸಂಪನ್ಮೂಲ. ಇದಕ್ಕಾಗಿ ಕಾರ್ಯಗಾರದಲ್ಲಿ 8 ಮತ್ತು 9ನೇ ವರ್ಗದ 60 ಮಕ್ಕಳಿಗೆ ತರಬೇತು ನೀಡಲಾಗಿದೆ. ಮಕ್ಕಳು ಕಲಾಕೃತಿಗಳಿಗೆ ಈಗಾಗಲೇ ಬೆಂಗಳೂರು ನಗರದಲ್ಲಿ ಬೇಡಿಕೆಯೂ ಬಂದಿದೆ' ಎನ್ನುತ್ತಾರೆ ಶಿಬಿರದ ನಿರ್ದೇಶಕ ಎಂ.ಎಲ್. ಮಧುಕರ್.
ಬೀದಿ ಬದಿಯಲ್ಲಿ ಬಿದ್ದಿರುವ ಕಸ ಸಂಗ್ರಹಿಸಲೂ ಮುಜುಗರ ಆಗುತ್ತಿತ್ತು. ಹಳೆಯ ಚಪ್ಪಲ್, ಟೈರ್, ಟ್ಯೂಬ್, ಪ್ಲಾಸ್ಟಿಕ್ಗಳಿಂದ ಸುಂದರ ಮುಖವಾಡ ಅರಳಿದ ಮೇಲೆ ನಿಸರ್ಗದ ಮೇಲೆ ಪ್ರೀತಿ ಹೆಚ್ಚಾಯಿತು. ಮೈಸೂರ್ ಮೋಹನ್, ಭಾಸ್ಕರ್ ತರಬೇತಿ ನೀಡಿ ಪ್ರೋತ್ಸಾಹಿಸಿದರು.
`ಹಳೇ ವಸ್ತುಗಳಿಂದ ನವೀನ ವಿನ್ಯಾಸಗಳನ್ನು ರಚಿಸುವುದು ಹೇಗೆಂದು ತಿಳಿಯಿತು' ಎನ್ನುತ್ತಾರೆ ವಿದ್ಯಾರ್ಥಿಗಳಾದ ಪ್ರೇಮ್ಸಾಗರ್, ಸಿಂಧೂ, ಚಂದನ, ಮೇಘ, ಜವೇರಿಯಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.