ಶಿವಮೊಗ್ಗ: ಮನಸ್ಸು ಅರಳುವಂತಹ ಶಿಕ್ಷಣವೇ ನಿಜವಾದ ಶಿಕ್ಷಣ. ಶಿಕ್ಷಣ, ಶಿಕ್ಷೆಯ ಮೂಲಕ ಲಭ್ಯವಾಗಬೇಕು. ಆಗ ವ್ಯಕ್ತಿ, ಶಕ್ತಿಯಾಗಿ ಬೆಳೆಯುತ್ತಾನೆ ಎಂದು ಜಾನಪದ ಗಾಯಕ ಯುಗಧರ್ಮ ರಾಮಣ್ಣ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಸಾಹಿತ್ಯ ಸಂಘದ 2011-12ನೇ ಸಾಲಿನ ಕಾರ್ಯಕ್ರಮಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಸಾಕ್ಷಾತ್ಕಾರವಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ ಎಂದ ಅವರು, ಕಾಮ, ಕ್ರೋಧ, ಮದ, ಮತ್ಸರ, ಭಯ ಮತ್ತು ಲೋಭ ಈ ಆರು ಗುಣಗಳನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ ನಾವು ಆರೋಗ್ಯವಾಗಿರುತ್ತೇವೆ. ಇದರಲ್ಲಿ ಯಾವುದಾದರೂ ಒಂದಕ್ಕೆ ಲೋಪ ಉಂಟಾದರೂ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದರು.
ನಾವು ಆರೋಗ್ಯವಾಗಿರಲು ಹುಟ್ಟಿದೂರಿನ ಋಣ, ಹೆತ್ತು ಹೊತ್ತವರ ಋಣ, ನೆತ್ತಿಗೆ ಜ್ಞಾನ ಕೊಟ್ಟವರ ಋಣವನ್ನು ತೀರಿಸುವಲ್ಲಿ ಮಗ್ನರಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಸಣ್ಣರಾಮ ಮಾತನಾಡಿ, ಯುಗಧರ್ಮ ರಾಮಣ್ಣ ಜಾನಪದಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರ ಬದುಕು ಮತ್ತು ಮಾತು ಎರಡೂ ಆದರ್ಶ ಎಂದರು.
ಪ್ರೊ.ಬಸವರಾಜ ನೆಲ್ಲಿಸರ ಅಭಿನಂದನಾ ಭಾಷಣ ಮಾಡಿದರು. ಸಾಹಿತ್ಯ ಸಂಘದ ಪದಾಧಿಕಾರಿಗಳನ್ನು ಪ್ರೊ.ಕುಮಾರಚಲ್ಯ ಅಭಿನಂದಿಸಿದರು. ಸಾಹಿತ್ಯ ಸಂಘದ ಉಪಾಧ್ಯಕ್ಷ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಡಾ.ಜಿ. ಪ್ರಶಾಂತನಾಯಕ, ಉಪ ಹಣಕಾಸು ಅಧಿಕಾರಿ ಶಿವಾನಂದ, ಸಹಾಯಕ ಹಣಕಾಸು ಅಧಿಕಾರಿ ಎಂ. ಚಂದ್ರಕಾಂತ ಉಪಸ್ಥಿತರಿದ್ದರು.
ಮಂಜಪ್ಪ ಪ್ರಾರ್ಥಿಸಿದರು. ಅನಿಲ್ಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ಶ್ವೇತಾ ನಿರೂಪಿಸಿದರು.