ಎಚ್.ಡಿ.ಕೋಟೆ: ಮಳೆಯಿಂದಾಗಿ ಮನೆ ಕಳೆದುಕೊಂಡ ಎಲ್ಲರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಶಾಸಕ ಚಿಕ್ಕಣ್ಣ ಭರವಸೆ ನೀಡಿದರು.
ಶನಿವಾರ ಸುರಿದ ಮಳೆಯಿಂದ ಹಾನಿ ಸಂಭವಿಸಿದ ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಅದರ ಅಂದಾಜು ಲೆಕ್ಕ ಹಾಕಿ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಪದೇಪದೇ ಕಚೇರಿಗೆ ಅಲೆಸಬಾರದು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಹೆಗ್ಗಡಾಪುರ ಕೆರೆಯ ಕೋಡಿ ಸೇತುವೆ ಕುಸಿದು ಬಿದ್ದಿರುವುದನ್ನು ವೀಕ್ಷಿಸಿದ ಶಾಸಕರು, ನೀರಾವರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸೇತುವೆ ನಿರ್ಮಾಣಕ್ಕೆ ಬೇಕಾಗುವ ಅಂದಾಜು ಪಟ್ಟಿಯನ್ನು ತಯಾರಿಸಿ ಶೀಘ್ರ ಕಾಮಗಾರಿ ಆರಂಬಿಸುವಂತೆ ಸಲಹೆ ಮಾಡಿದರು.
ನಾಗನಹಳ್ಳಿ, ಕಟ್ಟೇಮನುಗನಹಳ್ಳಿ, ಮೊತ್ತ, ಹೆಗ್ಗಡಾಪುರ ಗ್ರಾಮಗಳಿಗೂ ಭೇಟಿ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕಣ್ಣೇಗೌಡ, ಮಾಜಿ ಸದಸ್ಯ ಚಿಕ್ಕವೀರನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಟ್ಟಾಲಮ್ಮ, ತಹಶೀಲ್ದಾರ್ ಜಗದೀಶ್, ಎಇಇ ಅಚ್ಯುತ್, ಕಂದಾಯ ನಿರೀಕ್ಷಕ ಸಣ್ಣರಾಮಪ್ಪ, ಗ್ರಾಮ ಲೆಕ್ಕಾಧಿಕಾರಿ ಅನಿಲ್, ಮಹೇಶ್, ಸುಂದರ್ ಇದ್ದರು.