ದೇವದುರ್ಗ: ಅಧಿಕಾರದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ಸುಮಾರು 35 ಸಾವಿರ ಮನೆಗಳು ಮಂಜೂರಾಗಿದ್ದು, ಇವುಗಳ ಪೈಕಿ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳ ನಾಗರಿಕರಿಗೆ ವಾಜಪೇಯಿ ನಗರ ಆಶ್ರಯ ಯೋಜನೆ ಅಡಿಯಲ್ಲಿ 5 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲ ವಾರ್ಡ್ಗಳಲ್ಲಿ ನೋಂದಣಿ ಕಾರ್ಯ ಮುಗಿದಿದೆ. ಪ್ರಾಥಮಿಕ ಹಂತವಾಗಿ 130 ಫಲಾನುಭವಿಗಳಿಗೆ ತಲಾ 15ಸಾವಿರ ರೂಪಾಯಿಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಹಳ ದಿನಗಳಿಂದ ನೆನೆಗುದಿಗೆ ಬಿದಿದ್ದ ದೇವದುರ್ಗದಿಂದ ಹತ್ತಿಗುಡೂರು ಕ್ರಾಸ್ ಮುಖ್ಯ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 84ಕೋಟಿ ರೂಪಾಯಿಯ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಜಾಲಹಳ್ಳಿ ಗ್ರಾಮದಿಂದ ಗೂಗಲ್ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ಬಿಡುಗಡೆಯಾಗಿದ್ದ 108ಕೋಟಿ ರೂಪಾಯಿ ಕಾಮಗಾರಿಗೆ ಟೆಂಡರ್ ಹಂತದಲ್ಲಿ ಇದೆ. ಸದರಿ ಯೋಜನೆಯಿಂದ ಸುಮಾರು 40 ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿದ್ದು, ಇದೇ ಅನುದಾನದಲ್ಲಿ ಅರಕೇರಾ ಗ್ರಾಮದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ತಿಂತಿಣಿಬ್ರಿಜ್ಡ್ ಹತ್ತಿರ ಬರುವ ಗುಲ್ಬರ್ಗ ವಿಭಾಗದ ಕನಕಗುರು ಪೀಠಸಲ್ಲಿ ಕನಕಭವನ ನಿರ್ಮಾಣಕ್ಕೆ 75 ಲಕ್ಷ ರೂಪಾಯಿ, ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎಂದರು.
ಪಟ್ಟಣಕ್ಕೆ 24ಗಂಟೆಗಳ ಕುಡಿಯುವ ನೀರಿನ ಯೋಜನೆಗೆ ಮಂಜೂರಾದ 62 ಕೋಟಿ ರೂಪಾಯಿ ಅನುದಾನದಲ್ಲಿ ಈಗಾಗಲೇ 22ಕೋಟಿ ರೂಪಾಯಿಗೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕೂಡಲೇ ಬಾಕಿ ಉಳಿದ 40 ಕೋಟಿ ರೂಪಾಯಿ ಅನುದಾನಕ್ಕೆ ಟೆಂಡರ್ ಕರೆಯಲು ಒತ್ತಾಯಿಸಿದರು.
ಬರುವ ದಿನಗಳಲ್ಲಿ ತಾಲ್ಲೂಕಿಗೆ 250 ಹಾಸಿಗೆಯ ಆಸ್ಪತ್ರೆ, ಒಂದು ಮೆಡಿಕಲ್ ಕಾಲೇಜು, ಮೂರು ಕೈಗಾರಿಕಾ ತರಬೇತಿ ಕೇಂದ್ರ, ಒಂದು ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಡೇರುವ ಭರವಸೆ ಇದೆ ಎಂದ ಅವರು ಮಾನ್ವಿ ತಾಲ್ಲೂಕಿಗೆ ಮಿನಿ ವಿಧಾನಸೌಧ ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡ ಗುರುರಾಜ ದೇಸಾಯಿ, ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕೊಪ್ಪರ, ಎಪಿಎಂಸಿ ನಿರ್ದೇಶಕ ಶರಣಗೌಡ ಪರ್ತಪೂರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.