ಚೆನ್ನೈ (ಪಿಟಿಐ): ಮರಣದಂಡನೆ ರದ್ದುಪಡಿಸಬೇಕೆಂಬ ತಮ್ಮ ಹಳೆಯ ಬೇಡಿಕೆಯನ್ನು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಪುನರುಚ್ಚರಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಮೂವರ ಶಿಕ್ಷೆಯನ್ನು ಕಡಿಮೆ ಮಾಡಲು ಒತ್ತಾಯಿಸಿ ರಾಜ್ಯ ಸಚಿವ ಸಂಪುಟ ನಿರ್ಣಯ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಬೇಕೆಂದು ಶನಿವಾರ ಇಲ್ಲಿ ಆಗ್ರಹಿಸಿದ್ದಾರೆ.
`ರಾಜೀವ್ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿರುವ ಮುರುಗನ್, ಸಂತಾನಂ ಮತ್ತು ಪೇರ್ಅರಿವಳನ್ ಶಿಕ್ಷೆಯ ಅವಧಿಯನ್ನು ಮಾನವೀಯತೆ ಮೇಲೆ ಕಡಿಮೆ ಮಾಡಬೇಕೆಂದು' ಎಂದು ಅವರು ಒತ್ತಾಯಿಸಿದ್ದಾರೆ.
`ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬವಾಗಿದೆ ಎನ್ನುವ ಏಕೈಕ ಕಾರಣಕ್ಕೆ ಭಯೋತ್ಪಾದಕ ಚಟುವಟಿಕೆ ಮತ್ತು ನರಹತ್ಯೆಯಂತಹ ಘಟನೆಗಳಲ್ಲಿ ಶಾಮೀಲಾದವರಿಗೆ ನೀಡಿರುವ ಮರಣದಂಡನೆಯನ್ನು ಜೀವಾವಧಿಗೆ ಇಳಿಸಲಾಗುವುದಿಲ್ಲ' ಎಂದು ಭುಲ್ಲರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.