ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಚುನಾವಣೆಯ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಜೆ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಯುವಕಾಂಗ್ರೆಸ್ ಸಮಿತಿಗೆ ಮರುಳರಾಧ್ಯ ಮತ್ತು ಖಲೀದ್ ಹುಸೇನ್ ನಡುವೆ ಪೈಪೋಟಿ ನಡೆದಿತ್ತು. ಚುನಾವಣಾ ಫಲಿತಾಂಶದಲ್ಲಿ ಖಲೀದ್ ಹುಸೇನ್ 519 ಹಾಗೂ ಮರುಳಾರಾಧ್ಯಗೆ 502 ಮತಗಳು ದೊರೆತವು.
ಈ ಫಲಿತಾಂಶದಿಂದ ಅಸಮಾಧಾನಗೊಂಡ ಮರುಳಾರಾಧ್ಯ ಮತ್ತು ಬೆಂಬಲಿಗರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಚುನಾವಣೆಯಲ್ಲಿ ಅಕ್ರಮ ನಡೆದಿದೆ. 6 ವಿಧಾನಸಭೆ ಕ್ಷೇತ್ರಗಳಲ್ಲಿ ಮರಳರಾಧ್ಯ ಬೆಂಬಲಿಗರು ಗೆದ್ದಿದ್ದಾರೆ. ಆದರೆ, ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶ ತದ್ವಿರುದ್ಧ ಬಂದಿದೆ. ಮತಪತ್ರಗಳಿರುವ ಪೆಟ್ಟಿಗೆಯನ್ನು ಹೊಸದುರ್ಗದಿಂದ ನೇರವಾಗಿ ಕಾಂಗ್ರೆಸ್ ಕಚೇರಿಗೆ ತಂದಿಲ್ಲ. ಅಮೋಘ ಹೋಟೆಲ್ನಲ್ಲಿ ಪೆಟ್ಟಿಗೆಗಳನ್ನು ಇಟ್ಟು ಮತಪತ್ರಗಳ ಗೋಲ್ಮಾಲ್ ಮಾಡಲಾಗಿದೆ. ಇಡೀ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವುದರಿಂದ ಮರು ಚುನಾವಣೆ ನಡೆಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
`ಖಲೀದ್ ಹುಸೇನ್ಗೆ 41 ವರ್ಷವಾಗಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಅಕ್ರಮವಾಗಿದೆ. ಆರಂಭದಿಂದಲೂ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ. ತಿಪ್ಪೇಸ್ವಾಮಿ ಮತ್ತಿತರರು ನನ್ನ ವಿರುದ್ಧ ಷಡ್ಯಂತ್ರ ಹೂಡಿದ್ದರು. ಸುಳ್ಳು ದೌರ್ಜನ್ಯ ಪ್ರಕರಣ ಸಹ ದಾಖಲಿಸಿದ್ದರು~ ಎಂದು ಮರುಳಾರಾಧ್ಯ ದೂರಿದರು.
ಶಿಕ್ಷಕರ ಸಂಘಕ್ಕೆ ಆಯ್ಕೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಎಚ್. ಓಂಕಾರಪ್ಪ (ಅಧ್ಯಕ್ಷರು), ಬಿ. ತಿಮ್ಮಯ್ಯ (ಉಪಾಧ್ಯಕ್ಷರು), ಎಂ. ಗುರುಮೂರ್ತಿ (ಪ್ರಧಾನ ಕಾರ್ಯದರ್ಶಿ), ಆರ್.ಜಿ. ಮಹಮ್ಮದ್ ತಾಜೀರ್ಬಾಷಾ (ಖಜಾಂಚಿ), ಎಸ್. ಸುಂದ್ರಮ್ಮ (ಸಹಕಾರ್ಯದರ್ಶಿ), ಜಿ.ಕೆ. ಸುವರ್ಣ (ಸಂಘಟನಾ ಕಾರ್ಯದರ್ಶಿ).