ಕುಷ್ಟಗಿ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ದಾಖಲೆ ಮಳೆ ಸುರಿದಿದ್ದು, ತಾವರಗೇರಾದಲ್ಲಿ ಒಂದೇ ದಿನ 70 ಮಿ.ಮೀ ಮಳೆ ದಾಖಲಾಗಿದೆ. ಮಳೆಯಿಂದ ನಿಡಶೇಸಿ ಕೆರೆ, ರಾಯನಕೆರೆ, ಹುಲಿಯಾಪುರ ಕೆರೆ, ಕಬ್ಬರಗಿ, ಹೊಸಳ್ಳಿ ಕೆರೆಗಳು ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾಗಿವೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ ನಿಡಶೇಸಿ ಕೆರೆಗೆ ಹೊಂಡ ಬಿದ್ದು ಸಾಕಷ್ಟು ನೀರು ಪೋಲಾಗಿದೆ. ದುರಸ್ತಿ ಕಾರ್ಯ ಮುಂದುವರೆದಿದೆ.
ಯಲಬುರ್ತಿ ಬಳಿ ಇರುವ ರಾಜ್ಯ ಹೆದ್ದಾರಿ ಸಂಪೂರ್ಣ ಕೊಚ್ಚಿಹೋಗಿದೆ. ಅಲ್ಲದೇ ತಾಲ್ಲೂಕಿನ ಬಹುತೇಕ ರಸ್ತೆಗಳು ನಿರ್ವಹಣೆ ಕೊರತೆ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದ್ದವು. ಈಗ ಮಳೆ ಬಂದು ಮತ್ತಷ್ಟು ಹಾಳಾಗಿವೆ.
ಹಿರೇಬನ್ನಿಗೋಳದಲ್ಲಿ ಪ್ರವಾಹದ ನೀರು ಮನೆಗೆ ಹೊಕ್ಕಿದ್ದು ಸಂತ್ರಸ್ತ ಕುಟುಂಬಗಳಿಗೆ ಪಂಚಾಯಿತಿಯಲ್ಲಿನ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಗ್ರಾಮದ ಅನೇಕ ಮನೆಗಳಿಗೆ ಧಕ್ಕೆಯಾಗಿರುವುದರಿಂದ ವಸತಿಗೆ ಯೋಗ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ನಾಲ್ಕೂ ಹೋಬಳಿಗಳ ವ್ಯಾಪ್ತಿಯಲ್ಲಿನ ಸಜ್ಜೆ, ಸೂರ್ಯಕಾಂತಿ, ಶೇಂಗಾ, ಹತ್ತಿ, ಮೆಕ್ಕೆಜೋಳ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.