ಹೊನ್ನಾಳಿ: ತಾಲ್ಲೂಕಿನ ವಿವಿಧೆಡೆ ಈಚೆಗೆ ಸುರಿದ ಮಳೆ ಹಾಗೂ ಬೀಸಿದ ಭಾರೀ ಗಾಳಿಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಕೊಯ್ಲಿಗೆ ಬಂದ ಬತ್ತದ ಪೈರು ನೆಲಕಚ್ಚಿದೆ. ಇದರಿಂದಾಗಿ ರೈತರಿಗೆ ತೀವ್ರ ನಷ್ಟವಾಗಿದೆ.
ತಾಲ್ಲೂಕಿನ ದಿಡಗೂರು ಗ್ರಾಮದ ಗಂಟೇರ ದೇವೇಂದ್ರಪ್ಪ ಎಂಬುವವರಿಗೆ ಸೇರಿದ ಸುಮಾರು 5 ಎಕರೆ ಬತ್ತದ ಬೆಳೆ ನೆಲಕಚ್ಚಿದೆ.
ಐದಾರು ತಿಂಗಳು ರೈತ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿದೆ. ಬಿತ್ತನೆ ಬೀಜ, ಗೊಬ್ಬರ, ಔಷಧಿ ಇತ್ಯಾದಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ರೈತ ಬತ್ತದ ಬೆಳೆ ಹಾಳಾಗಿರುವುದರಿಂದ ತೀವ್ರ ನೊಂದಿದ್ದಾನೆ.
ಇದಲ್ಲದೇ ದಿಡಗೂರು ಗ್ರಾಮದ ಅನೇಕ ರೈತರಿಗೆ ಸೇರಿದ ನೂರಾರು ಎಕರೆ ಪ್ರದೇಶದ ಬತ್ತದ ಬೆಳೆ ಮಳೆ- ಗಾಳಿಯಿಂದಾಗಿ ಹಾಳಾಗಿದೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ. ಸದಸ್ಯ ಮಾರುತಿ ಒತ್ತಾಯಿಸಿದ್ದಾರೆ.