ಚಿಕ್ಕಮಗಳೂರು: ದೇವಗೊಂಡನಹಳ್ಳಿ ಸುತ್ತಮುತ್ತ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸುರಿದ ಭಾರೀ ಮಳೆಗೆ ನೂರಾರು ಎಕರೆ ಹತ್ತಿ ಬೆಳೆ ನೀರು ಪಾಲಾಗಿದೆ. ಕೆಲವು ಮನೆಗಳು ಸಂಪೂರ್ಣ ಕುಸಿದುಬಿದ್ದಿದ್ದರೆ. ಇನ್ನು ಕೆಲವು ಮನೆಗಳ ಗೋಡೆಗಳು ಕುಸಿದು ಅಪಾರ ಹಾನಿ ಸಂಭವಿಸಿದೆ.
ಮಳೆಯಿಂದ ಹಾನಿಯಾಗಿರುವ ಪ್ರದೇಶ ಗಳಿಗೆ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಸಿ.ಟಿ.ರವಿ, ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ನೀಡುವಂತೆ ತಹಶೀಲ್ದಾರ್ ವೀಣಾ ಅವರಿಗೆ ಸೂಚಿಸಿದರು.
ಸಿಡಿಎ ಮಾಜಿ ಅಧ್ಯಕ್ಷ ರಂಗನಾಥ್, ಸ್ಥಳೀಯರಾದ ತಿಮ್ಮೇಗೌಡ, ನಟರಾಜ್, ಮಹೇಶ್ ಇದ್ದರು.
ತಿಂಗಳೊಳಗೆ ಕುಡಿಯುವ ನೀರು
ಚಿಕ್ಕಮಗಳೂರು: ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಓವರ್ಹೆಡ್ ಟ್ಯಾಂಕ್ಗಳಿಗೆ ಮುಂದಿನ ಒಂದು ತಿಂಗಳಲ್ಲಿ ಸಂಪರ್ಕ ಕಲ್ಪಿಸಿ ಜನರಿಗೆ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಕೋಟೆ ಬಡಾವಣೆಯಲ್ಲಿ ಇತ್ತೀಚೆಗೆ ನಾಗರಿಕರೊಂದಿಗೆ ನಡೆಸಿದ ಕುಂದುಕೊರತೆ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.ಕೋಟೆ, ಶಂಕರಪುರ, ನೆಹರು ನಗರ ಸೇರಿದಂತೆ ನಗರದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ನೂತನ ಓವರ್ಹೆಡ್ ಟ್ಯಾಂಕ್ಗಳಿಗೆ ಸಂಪರ್ಕ ಕಲ್ಪಿಸಲು ನಗರ ನೀರು ಒಳಚರಂಡಿ ಮಂಡಳಿಯಿಂದ ಒಂದು ವಾರದಲ್ಲಿ ಟೆಂಡರ್ ಕರೆಯಲು ಸೂಚಿಸಲಾಗಿದೆ.
ಮುಂದಿನ ಒಂದು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ನಗರದ ಜನರಿಗೆ ಸಮರ್ಪಕ ನೀರು ಪೂರೈಸಲಾಗುತ್ತದೆ. ನಮ್ಮನ್ನು ನಂಬಿದವ ರನ್ನು ಎಂದೂ ನಾವು ಕೈಬಿಟ್ಟಿಲ್ಲ, ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ರೀತಿಯ ಸಹಕಾರವೂ ನೀಡಲಾಗಿದೆ. ರಾಜ್ಯದಲ್ಲಿ ನೂತನವಾಗಿ ಜಾರಿಗೆ ತಂದಿರುವ ಸಕಾಲ ಯೋಜನೆಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಕೋಟೆ ಮುಖ್ಯರಸ್ತೆಗೆ ಸಾಗುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ನಿವೇಶನಗಳ ಮಾಲೀಕರು ಮುಂದಾಗಿ ಸಾರ್ವಜನಿಕ ಉಪಯೋಗಕ್ಕೆ ಜಾಗ ಬಿಟ್ಟುಕೊಟ್ಟರೆ ನನ್ನ ಸ್ವಂತ ನಿವೇಶನದಲ್ಲಿ ಹತ್ತು ಅಡಿ ಜಾಗ ಬಿಟ್ಟುಕೊಡುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಮಾಜಿ ಅಧ್ಯಕ್ಷ ಕೋಟೆ ಕೃಷ್ಣ, ಸದಸ್ಯೆ ಲಕ್ಷ್ಮಮ್ಮ, ಮಾಜಿ ಸದಸ್ಯ ಜಯಣ್ಣ, ವೆಂಕಟೇಶ್ ನಾಯ್ಡು, ಸಿಡಿಎ ಮಾಜಿ ಸದಸ್ಯ ಮಧುಕುಮಾರ್ರಾಜ್ ಅರಸ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.