ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಕೊರತೆ: ಕುಡಿಯಲೂ ನೀರಿಲ್ಲ!

Last Updated 1 ಜುಲೈ 2013, 6:01 IST
ಅಕ್ಷರ ಗಾತ್ರ

ಅರಸೀಕೆರೆ: ಯಾವುದೇ ಶಾಶ್ವತ ನೀರಾವರಿ ಯೋಜನೆ ಇಲ್ಲದೇ ಇದ್ದರಿಂದ ಅಂತರ್ಜಲ ಬತ್ತಿ ಬಯಲು ಪ್ರದೇಶದ ಕಲ್ಪವೃಕ್ಷ ತೆಂಗು ಹಾಗೂ ಅಡಿಕೆ ತೋಟಗಳು ಒಣಗುತ್ತಿವೆ. ಮಳೆ ಬಾರದೆ ಕುಡಿಯುವ ನೀರು ಸಿಗದೆ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ತಾಲ್ಲೂಕಿನ ಜನ ಹಾಗೂ ರೈತರು ಪ್ರತಿದಿನ ಆಗಸದ ಕಡೆ ಮೋಡ ನೋಡುತ್ತಲೇ ಕಂಗೆಡುವ ಮೂಲಕ ಕೈಚೆಲ್ಲಿ ಕುಳಿತಿದ್ದಾರೆ.

ಈ ತಾಲ್ಲೂಕಿಗೆ ಸತತ ಐದಾರು ವರ್ಷಗಳಿಂದ ತೀವ್ರ ಬರಗಾಲ ಆವರಿಸಿ ರೈತರು ಜನ, ಜಾನುವಾರುಗಳು ಮಳೆ ಬಾರದೆ ಕುಡಿಯಲು ನೀರಿಲ್ಲದೆ ಮೇಯಲು ಮೇವಿಲ್ಲದೇ, ಕೃಷಿ ಕೂಲಿ ಕಾರ್ಮಿಕರು ಕೈಗಳಿಗೆ ಕೆಲಸವಿಲ್ಲದೆ ಕೆಲಸಕ್ಕಾಗಿ ನಗರ ಪಟ್ಟಣಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಿರುವ ದೃಶ್ಯ ಗ್ರಾಮೀಣ ಪ್ರದೇ ಶದಲ್ಲಿ ಸಾಮಾನ್ಯವಾಗಿದೆ.

ಕುಡಿಯಲು ನೀರಿಲ್ಲ: ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರಿಲ್ಲದೆ ಪ್ರತಿನಿತ್ಯ ಮಹಿಳೆಯರು, ಮಕ್ಕಳು, ಯುವಕರು ಖಾಲಿ ಬಿಂದಿಗೆ ಹಿಡಿದು ಅಲೆಯುತ್ತಿದ್ದಾ ರೆ.ವರುಣನ ಅವಕೃಪೆಗೆ ಒಳಗಾಗಿ ಮಳೆಯ ಮುನಿಸಿನಿಂದ ಅಂತರ್ಜಲ ಪಾತಾಳ ಕಂಡಿದೆ. ಅಲ್ಲದೆ ಕೊಳವೆಬಾವಿಗಳಲ್ಲಿನ ಪ್ಲೋರೆಡ್‌ಯುಕ್ತ ನೀರನ್ನು ಕುಡಿದು ಜನರು ರೋಗ ರುಜಿನುಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರತಿ ಗ್ರಾಮಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರು ಬರಿದಾಗುತ್ತಿದೆ.

ಕೇವಲ 180 ಅಡಿಗಳಿಂದ 300 ಅಡಿಗೆ ಸಿಗುತ್ತಿದ್ದ ನೀರು ಈಗ 800 ಅಡಿಗಳಿಂದ 900 ಅಡಿ ಕೊರೆದರೂ ನೀರು ಸಿಗದೇ ಹೊಸ ಕೊಳವೆ ಬಾವಿಗಳು ವಿಫಲವಾಗುತ್ತಿದ್ದು, ನೀರಿನ ಸಮಸ್ಯೆ ಗಂಭೀರ ಸ್ಥಿತಿಗೆ ಹೋಗಿದೆ.

ಜಿಲ್ಲೆಯಲ್ಲಿ ಹೇಮಾವತಿ ಹಾಗೂ ಯಗಚಿ ಎರಡು ನದಿಗಳು ಹರಿದರೂ ಶಾಶ್ವತ ನೀರಾವರಿ ಹಾಗೂ ನೀರಿನ ಸೆಲೆ ಇಲ್ಲದಿರುವುದು ಅರಸೀಕೆರೆ ತಾಲ್ಲೂಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ತೆಂಗಿನ ಹಾಗೂಡಿಕೆ ತೋಟಗಳು ಹಾಳಾಗಿದ್ದರೆ, ಜಮೀನುಗಳು ಉಳುಮೆ ಇಲ್ಲದೆ ಬೋಳು ಬೋಲಾಗಿ ಕಾಣುತ್ತಿವೆ.

ಪಂಪ್‌ಸೆಟ್ ಹೊಂದಿದ್ದ ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ತೋಟಗಳು ಈಗ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸುಳಿ ಉದುರಿ ಒಣಗಿ ನಿಂತಿರುವ ದೃಶ್ಯವನ್ನು ತಾಲ್ಲೂಕಿನ ಎಲ್ಲೆಡೆ ಕಾಣಬಹುದು..

ಬಿಸಿಲಿನ ಪ್ರಖರತೆಗೆ ಅಡಿಕೆ ಕಾಯಿ ಉದುರುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತಾಲ್ಲೂಕಿನ ಜೀವಜಲವಾದ ಕಣಕಟ್ಟೆ, ಹಾರನಹಳ್ಳಿ, ಕಾಮಸಮು ದ್ರ, ಅರಸೀಕೆರೆ ಕಂತೇನಹಳ್ಳಿ, ಗಂಡಸಿ ಕೆರೆಗಳ ಒಡಲು ಮಳೆಯಿಲ್ಲದೆ ಖಾಲಿಯಾಗಿ ಭಣಗುಡುತ್ತಿವೆ.
ಸರ್ಕಾರ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದೆಯಾದರೂ ಇದುವರೆವಿಗೂ ಯಾವುದೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲದೆ ಇರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾರ್ಮಿಕರ ವಲಸೆ ತಪ್ಪಿಸಲು ಉದ್ಯೋಗ ಸೃಷ್ಟಿ ಮಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಕೆಲಸಕ್ಕೆ ಕಾರ್ಮಿಕರನ್ನು ಕರೆದರೆ ಸರ್ಕಾರ ನೀಡುವ ಕೂಲಿ ಸಾಕಾಗುವುದಿಲ್ಲೆಂದು ಕೆಲಸಕ್ಕೆ ಹೋಗದಿರುವುದರಿಂದ ಜೆಸಿಬಿ ಯಂತ್ರಗಳು ಕಾರ್ಮಿ ಕರ ಕೆಲಸಗಳನ್ನು ಆಕ್ರಮಿಸಿವೆ.

ಮೇವಿನ ಕೊರತೆ: ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿ ನೀಡುವ ಸದುದ್ದೇಶದಿಂದ ಹಲವೆಡೆ ಗೋಶಾಲೆಗಳನ್ನು ತೆರೆಯಲಾಗಿತ್ತು.ಕೆಲ ದಿನ ಗಳ ನಂತರ ಮೇವಿನ ಕೊರತೆಯಿಂದ ಅವುಗಳನ್ನು ಮುಚ್ಚಿರುವುದರಿಂದ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಉಂಟಾಗಿದೆ. ದುರಂತ ಎಂದರೆ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದರೂ ಈ ಭಾಗದಲ್ಲಿ ವರುಣ ಮುನಿಸಿಕೊಂಡಿದ್ದಾನೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT