ಬಸವಕಲ್ಯಾಣ: `ಮಹಿಳೆಯರ ಮೀಸಲಾತಿ ಬಗೆಗೆ ಅನ್ಯರು ಬರೀ ಮಾತನಾಡುತ್ತಾರೆ. ಆದರೆ ಕೆಜೆಪಿ ಪಕ್ಷದಿಂದ ಈ ಕ್ಷೇತ್ರ ಒಳಗೊಂಡು ಒಟ್ಟು 11 ಮಹಿಳೆಯರಿಗೆ ಟಿಕೆಟ್ ಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳಾ ಸಮಾನತೆ ಸಾರಿದ ಬಸವಣ್ಣನ ನಾಡಿನಲ್ಲಿ ಮಲ್ಲಮ್ಮ ಪಾಟೀಲ ಅವರಿಗೆ ಟಿಕೆಟ್ ದೊರೆತಿರುವುದು ದೇವರ ಇಚ್ಚೆ ಎಂದರು. `ಸಿದ್ಧರಾಮಯ್ಯ, ಈಶ್ವರಪ್ಪನವರು ಶಾಸಕರಾಗುವುದೇ ಕಷ್ಟ. ಆದರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದರು. ತಮ್ಮ ವಿರುದ್ಧ ಆಧಾರ ರಹಿತವಾಗಿ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು.
ಮಾಜಿ ಸಚಿವರಾದ ಬಸವರಾಜ ಪಾಟೀಲ ಅಟ್ಟೂರ್, ಗುರುಪಾದಪ್ಪ ನಾಗಮಾರಪಳ್ಳಿ, ಮಾಜಿ ಶಾಸಕ ಸುಭಾಷ ಕಲ್ಲೂರ್, ಅಭ್ಯರ್ಥಿಗಳಾದ ಮಲ್ಲಮ್ಮ ಪಾಟೀಲ ಅಟ್ಟೂರ್, ಡಿ.ಕೆ.ಸಿದ್ರಾಮ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಂಜೀವ ಕಾಳೇಕರ್, ಚಂದ್ರಶೇಖರ ಮುಡಬಿ, ಸಂಗೀತಾ ಪಾಟೀಲ ಪಾಲ್ಗೊಂಡಿದ್ದರು.
ಬೀದಿ ನಾಟಕ ಇಂದು
ಬೀದರ್: ಮತದಾನ ಹಕ್ಕು ಕುರಿತ ಜಾಗೃತಿ ಬೀದಿ ನಾಟಕ ಮಂಗಳವಾರ (ಏ.23) ಜಿಲ್ಲೆಯ 9 ಗ್ರಾಮಗಳಲ್ಲಿ ಪ್ರದರ್ಶನವಾಗಲಿದೆ. ಮೂರು ಪ್ರತ್ಯೇಕ ತಂಡಗಳು ತಲಾ ಮೂರು ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಮತದಾನದ ಬಗೆಗೆ ಜಾಗೃತಿ ಮೂಡಿಸಲಿವೆ.
ಬೆಳಿಗ್ಗೆ 9 ಗಂಟೆಗೆ ಗಾದಗಿ, ಜನವಾಡ ಮತ್ತು ಆನಂದವಾಡಿ ವಾರ್ಡ್ ಸಂಖ್ಯೆ 3, ಸಾಯಂಕಾಲ 4 ಗಂಟೆಗೆ ಅಲಿಯಾಬಾದ್, ಚಿಮಕೋಡ್ ಹಾಗೂ ಆನಂದವಾಡಿ ವಾರ್ಡ್ ಸಂಖ್ಯೆ 23, ಸಂಜೆ 6 ಗಂಟೆಗೆ ಚಿಕ್ಪೇಟ್, ಕಂಗಟಿ ಹಾಗೂ ತೂಗಾಂವ್(ಸಿ) ಗ್ರಾಮಗಳಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.